ವಿಜಯಸಾಕ್ಷಿ ಸುದ್ದಿ, ಗದಗ: ಮತಗಳ್ಳತನದ ಕಾಂಗ್ರೆಸ್ ಆರೋಪಕ್ಕೆ ಸತ್ಯ ನುಡಿದ ಸಚಿವ ರಾಜಣ್ಣ ಅವರ ರಾಜೀನಾಮೆ ಪಡೆದುಕೊಂಡ ಕಾಂಗ್ರೆಸ್ ಹೈಕಮಾಂಡ್ ಆಂತರಿಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮತಗಳ್ಳತನದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದ ರಾಹುಲ್ ಗಾಂಧಿ ಅವರ ನಡೆಯನ್ನು ಸಮರ್ಥಿಸದ ರಾಜಣ್ಣ, ಮತದಾರ ಪಟ್ಟಿ ಸಿದ್ಧವಾಗಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೇ. ಅದರಲ್ಲಿ ನಮ್ಮ ತಪ್ಪಿದೆ ಎಂದು ಸತ್ಯ ಹೇಳಿಕೊಂಡಿದ್ದನ್ನೇ ಕಾರಣವಿಟ್ಟುಕೊಂಡು ಅವರ ರಾಜೀನಾಮೆ ಪಡೆದ ಕಾಂಗ್ರೆಸ್, ವ್ಯಕ್ತಿಯ ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡಿದೆ.
ಪಕ್ಷದ ಬೆಳವಣಿಗೆಯಲ್ಲಿ ಸತತ ವೈಫಲ್ಯ ಕಾಣುತ್ತಿರುವ ರಾಹುಲ್ ಗಾಂಧಿ, ಈಗ ಸ್ವ ಪಕ್ಷದವರಿಂದಲೇ ಮುಜುಗರಕ್ಕೆ ಈಡಾಗುವ ಪರಸ್ಥಿತಿ ಬಂದಿದ್ದು ಅವರು ಎಷ್ಟು ಪ್ರತಿಭಾವಂತರು ಎಂಬುದಕ್ಕೆ ಸಾಕ್ಷಿಯಾಗಿದೆ. ಅಹಿಂದ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ಪರಶಿಷ್ಟ ಪಂಗಡದ ಒಬ್ಬ ವರ್ಚಸ್ವಿ ನಾಯಕನ ಪದಚ್ಯುತಿ ಮಾಡುವ ಮೂಲಕ ಅಸಲಿ ಮುಖವಾಡ ತೋರ್ಪಡಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.