ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದು ನೀತಿ ಸಂಹಿತೆ ನೋಡಲ್ ಅಧಿಕಾರಿಗಳು ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ.ಮೋಹನ್ ಹೇಳಿದರು.
ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾ.ಪಂ ವ್ಯಾಪ್ತಿಯ ಬೊಮ್ಮಸಾಗರ ಗ್ರಾಮದಲ್ಲಿ ಶುಕ್ರವಾರ ನಡೆದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ವರ್ಷದಿಂದ ವರ್ಷಕ್ಕೆ ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಕೂಲಿಕಾರರು, ಗ್ರಾಮೀಣ ಪ್ರದೇಶದ ಜನರು ಕಡ್ಡಾಯವಾಗಿ ಮತದಾನ ಮಾಡಬೇಕು. 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.
ಮತದಾನ ನಮ್ಮೆಲ್ಲರ ಹಕ್ಕಾಗಿದೆ. ಮತದಾನದಿಂದ ಯಾರೂ ಹೊರಗುಳಿಯದೆ ಕಡ್ಡಾಯವಾಗಿ ಮತದಾನ ಮಾಡಿ, ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಬೇಸಿಗೆಯಲ್ಲಿ ಯಾರೂ ಗುಳೇ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಮಳೆಯಾಗುವವರೆಗೂ ನಿಮಗೆ ನಿರಂತರ ಕೆಲಸ ನೀಡಲಾಗುವುದು. ನೀವು ಸರಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೂಲಿಕಾರರು ಎನ್ಎಂಆರ್ನಲ್ಲಿ ಹೆಸರು ಇರುವ ಬಗ್ಗೆಎ ಮೊದಲು ಪರಿಶೀಲಿಸಿ, ನಂತರ ಕೆಲಸಕ್ಕೆ ಬರಬೇಕು. ಒಂದು ವೇಳೆ ಹೆಸರು ಇಲ್ಲದೆ ಕೆಲಸಕ್ಕೆ ಬಂದರೆ ಹಣ ಬರುವುದಿಲ್ಲ. ಕೂಲಿಕಾರರು ಎರಡು ಬಾರಿ ಕಡ್ಡಾಯವಾಗಿ ಹಾಜರಿ ಹಾಕಿಸಬೇಕು. ಅದರಲ್ಲಿ ಒಂದು ಹಾಜರಿ ಹಾಕಿಸದಿದ್ದರೂ ಹಣ ಬರುವುದಿಲ್ಲ.
ಕೂಲಿಕಾರರು ಅಳತೆಗೆ ತಕ್ಕಂತೆ ಪಡ ಕಡಿಯಬೇಕು. ನೀವು ಕಡಿಯದಿದ್ದರೆ ಕೂಲಿ ಅಳತೆ ಎಷ್ಟು ಇರುತ್ತದೆ ಅಷ್ಟೇ ಹಣ ಜಮಾ ಮಾಡುತ್ತಾರೆ. ಹೀಗಾಗಿ, ಸರಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಎಸ್.ಕೆ. ಕವಡೇಲಿ, ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ಟಿಎಂಐಎಸ್ ಸಂಯೋಜಕ ವಸಂತ ಅನ್ವರಿ, ತಾಂತ್ರಿಕ ಸಂಯೋಜಕರಾದ ಪ್ರಿಯಾಂಕ ಅಂಗಡಿ, ಎಸ್.ಡಿ.ಎ ಪವಾಡಿಗೌಡ್ರ, ಟಿಎಎ ಸಿದ್ದು ಗುಡಿಮನಿ, ಬಿಎಫ್.ಟಿ ಜ್ಯೋತಿ ವಡ್ಡರ, ಡಿಇಒ ಪ್ರಕಾಶ, ಜಿಕೆಎಂ ಶಿವಗಂಗಾ ಹುಲ್ಲಣ್ಣವರ, ಗ್ರಾ.ಪಂ. ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.
ತಾ.ಪಂ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ್ ಮಾತನಾಡಿ, ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನದ ಮೂಲಕ ಏಪ್ರಿಲ್ 1ರಿಂದ ಮೇ ಅಂತ್ಯದವರೆಗೂ 2 ತಿಂಗಳು ನಿರಂತರ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಹೇಗೆ ಕೆಲಸ ಮಾಡುತ್ತೀರಿ ಎಂಬುದರ ಮೇಲೆ ನಿಮಗೆ ಮುಂದಿನ ಕೆಲಸ ನೀಡಲಾಗುತ್ತದೆ. ಆ ನಿಟ್ಟಿನಲ್ಲಿ ಕೂಲಿಕಾರರು ಚೆನ್ನಾಗಿ ಕೆಲಸ ಮಾಡಿ ಪಂಚಾಯಿತಿಗೆ ಸಹಕಾರ ನೀಡಿದರೆ, ಎರಡು ತಿಂಗಳ ನಿರಂತರ ಕೆಲಸ ನೀಡಲಾಗುವುದು ಎಂದು ತಿಳಿಸಿದರು.