ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯಾವುದೇ ಸಮಾಜವಿರಲಿ, ಅದಕ್ಕೆ ತನ್ನದೆ ಆದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳಿರುತ್ತವೆ. ಪ್ರತಿಯೊಂದು ಸಮಾಜದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿರುತ್ತದೆ. ಇದರಲ್ಲಿ ಎಲ್ಲರ ಸಹಕಾರ ಅವಶ್ಯ ಎಂದು ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಹಾಗೂ ಶಂಕರಸೇವಾ ಸಮಿತಿ ಅಧ್ಯಕ್ಷ ವಿ.ಎಲ್. ಪೂಜಾರ ಅಭಿಪ್ರಾಯಪಟ್ಟರು.
ಅವರು ರವಿವಾರ ಪಟ್ಟಣದ ಶ್ರೀ ಶಂಕರಭಾರತಿಮಠದಲ್ಲಿ ಬ್ರಹ್ಮವೃಂದದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ 70-80 ವರ್ಷಗಳ ಹಿಂದೆ ಬ್ರಹ್ಮವೃಂದವನ್ನು ಅಂದಿನ ಹಿರಿಯರು ಕಟ್ಟಿ ತನ್ಮೂಲಕ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರಲಾಗುತ್ತಿದೆ. ಅಲ್ಲದೆ ಶಂಕರಭಾರತಿ ಮಠದ ಸಮುದಾಯಭವನವನ್ನು ಸಹ ನಿರ್ಮಿಸಿದ್ದು, ಇಂದು ಸಂಘ ಆರ್ಥಿಕವಾಗಿ ಸಮಾಜಕ್ಕೆ ಹೊರೆಯಾಗದಂತೆ ಬೆಳೆಯುತ್ತಿರುವದು ಹೆಮ್ಮೆಯ ವಿಷಯವಾಗಿದೆ. ಸಣ್ಣ ಸಮಾಜವೆಂದು ನಮ್ಮಲ್ಲಿ ಕೀಳುರಿಮೆ ಬೇಡ, ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜ ಬಾಂಧವರು ಸೇರಿ ಹೆಚ್ಚು ಹೆಚ್ಚು ಸಂಘಟಿತರಾಗೋಣ ಎಂದರು.
ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ತಾಲೂಕಾ ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ. ತಾಲೂಕ, ಜಿಲ್ಲಾ ಹಾಗೂ ಸ್ಥಳೀಯವಾಗಿ ನಡೆಯುವ ಸಮಾಜದ ಸಭೆ-ಸಮಾರಂಭಗಳಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಬೇಕು. ಪ್ರತಿವರ್ಷದಂತೆ ಈ ವರ್ಷವು ಸಹ ಬ್ರಹ್ಮವೃಂದವು ಯಾವುದೇ ರೀತಿ ಆರ್ಥಿಕ ಸಮಸ್ಯೆ ಇಲ್ಲದೆ ಸಾಗುತ್ತಿರುವದಕ್ಕೆ ಎಲ್ಲರ ಸಹಕಾರ ಕಾರಣವಾಗಿದ್ದು, ಶ್ರೀ ಶಂಕರಭಾರತಿ ಮಠದ ಸಮುದಾಯಭವನಕ್ಕೆ ಇದೀಗ ಸಾಕಷ್ಟು ಅನೂಕೂಲತೆಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ಅರವಿಂದ ದೇಶಪಾಂಡೆ ಮತ್ತು ಖಜಾಂಚಿ ಎಸ್.ಜಿ. ಹೊಂಬಳ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಸಭೆಯಲ್ಲಿ ಆರ್.ಎಚ್. ಕುಲಕರ್ಣಿ, ಕೆ.ಎಸ್. ಕುಲಕರ್ಣಿ, ವಿ.ಆರ್. ಗುಡಿ, ನಾರಾಯಣಭಟ್ ಪುರಾಣಿಕ, ಧೃವ ಬೆಟಗೇರಿ, ಎ.ಪಿ. ಕುಲಕರ್ಣಿ, ಡಿ.ಎಂ. ಪೂಜಾರ, ರಾಜಣ್ಣ ರಾಯಚೂರ, ಮೀನಾಕ್ಷಿ ಸರದೇಶಪಾಂಡೆ, ಅನುಜಾ ಪೂಜಾರ ಸೇರಿದಂತೆ ಅನೇಕರಿದ್ದರು.