ವೈದ್ಯಕೀಯ ಕ್ಷೇತ್ರದಲ್ಲಿ ಆರ್‌ಎಂಎಸ್‌ಎಸ್ ಕೊಡುಗೆ ಅಪಾರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿಯ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದೆ. ಆ ನಿಟ್ಟಿನಲ್ಲಿ ಮುಂದುವರೆದು ಬಡವರಿಗೆ ಹೆಚ್ಚು ಅನುಕೂಲವಾಗುವ ದೃಷ್ಟಿಯಿಂದ ನೂತನವಾಗಿ ಮೂರು ಹೊಸ ಆವಿಷ್ಕಾರಗಳನ್ನು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಹುಲಕೋಟಿಯ ಸ್ವಾಮಿ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ, ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನರರೋಗ ಶಸ್ತçಚಿಕಿತ್ಸೆ, ಕೀಲು ಜೋಡಣೆ ಹಾಗೂ ಕ್ರೋಮಾ ಕೇರ್ ಯೂನಿಟ್ ಉದ್ಘಾಟಿಸಿ ಮಾತನಾಡಿದ ಅವರು, ಕೆ.ಹೆಚ್. ಪಾಟೀಲರ ಕನಸು ನನಸಾಗುವ ದೃಷ್ಟಿಯಿಂದ ಯುವಕರ ತಂಡ ಹತ್ತಾರು ಹೊಸ ಯೋಜನೆಗಳ ಮೂಲಕ ಸಾಮಾಜಿಕ ಕಾರ್ಯ ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕೆ.ಹೆಚ್. ಪಾಟೀಲ್ ಪ್ರತಿಷ್ಠಾನದ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಸಹಯೋಗದಲ್ಲಿ ಕಟ್ಟಕಡೆಯ ಬಡವರಿಗೂ ಶುದ್ಧ ಕುಡಿಯುವ ನೀರು ಒದಗಿಸಿದೆ. ಅಲ್ಲದೆ, ಕೊರೋನಾ ಸಂದರ್ಭದಲ್ಲಿ ಈ ಸಂಸ್ಥೆಯ ವೈದ್ಯರು, ಸಿಬ್ಬಂದಿಗಳು ಸ್ವಯಂ ಪ್ರೇರಣೆಯಿಂದ ಕೈಗೊಂಡ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.

ಸೇವಾ ತಂಡದ ಮೂಲಕ ಲಕ್ಷಾಂತರ ಜನರಿಗೆ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ಶಸ್ತçಚಿಕಿತ್ಸೆ, ಕನ್ನಡಕ ವಿತರಣೆ ಸೇರಿದಂತೆ ಗಂಭೀರ ಹೃದಯ ಕಾಯಿಲೆಗಳಿಗೂ ಬಡವರ ಮನೆ ಬಾಗಿಲಿಗೆ ಬಂದು ಸೇವಿ ಸಲ್ಲಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಇಂದು ಪರಿಣಿತ ವೈದ್ಯರ ತಂಡ ಸಮಾಜಕ್ಕೆ, ರೈತ ಕುಟುಂಬಕ್ಕೆ ಹೆಚ್ಚು ಜನರಿಗೆ ಅನುಕೂಲವಾದ ದೃಷ್ಟಿಯಿಂದ ಕೈಗೊಳ್ಳುತ್ತಿರುವ ರಚನಾತ್ಮಕ ಕಾರ್ಯ ವಿಶೇಷವಾಗಿದೆ ಎಂದರು.

ಜನಕಲ್ಯಾಣದ ದೃಷ್ಟಿಯಿಂದ ಒಂದು ಸರ್ಕಾರ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡುವ ಮೂಲಕ ಕೆ.ಹೆಚ್. ಪಾಟೀಲರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲ ಸಂಸ್ಥೆಗಳಿಗಿಂತ ಮಿಗಿಲಾಗಿ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಕೈಗೊಂಡ ಕಾರ್ಯಗಳು ನೆರವೇರಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.

ಡಾ. ಎಸ್.ಆರ್. ನಾಗನೂರರ ಸೇವೆ ಅಪಾರ. ಇಂದು ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಹೆಮ್ಮರವಾಗಿ ಬೆಳೆಯಲು ಡಾ. ನಾಗನೂರರ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಉಳಿಸಿ-ಬೆಳೆಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅವರಿಂದ ಇಂದು ಹೊಸ ಹೊಸ ಆವಿಷ್ಕಾರಗಳನ್ನು ಅನಾವರಣಗೊಳಿಸಲು ಸಾಧ್ಯವಾಗಿದೆ. ಅಲ್ಲದೆ ಈ ಸಂಸ್ಥೆಯ ಬೆಳವಣಿಗೆಗಾಗಿ ಹಗಲಿರುಳು ಎನ್ನದೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಡಾ. ವೇಮನ ಸಾಹುಕಾರ, ಡಾ. ಅರವಿಂದ ಪಾಟೀಲ, ಡಾ. ವಿನಾಯಕ, ಡಾ. ಸಿದ್ಧಾರ್ಥ, ಅಕ್ಬರ್‌ಸಾಬ್ ಬಬರ್ಚಿ, ಅಶೋಕ್ ಮಂದಾಲಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ವೈದ್ಯಕೀಯ ಶಿಕ್ಷಣ, ವಸತಿ ಸೇರಿದಂತೆ ಎಲ್ಲ ಬಗೆಯ ಸವಲತ್ತುಗಳನ್ನು ಜನರಿಗೆ ನೀಡುವ ನಿಟ್ಟಿನಲ್ಲಿ ಸಮಾನ ಮನಸ್ಕರ ಬಳಗವನ್ನು ಕಟ್ಟಿಕೊಂಡು ಕೆ.ಹೆಚ್. ಪಾಟೀಲರ ಕನಸು ನನಸಾಗಿಸುವ ನಿಟ್ಟಿನಲ್ಲಿ ಎಚ್.ಕೆ. ಪಾಟೀಲರು ಹಗಲು-ರಾತ್ರಿ ಎನ್ನದೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಅವರು ಮಾಡುವ ಕೆಲಸ ಸಮಾಜದ ಬಡವರ ಸರ್ವಾಂಗೀನ ಅಭಿವೃದ್ಧಿಗೆ ನೆರವಾಗಲಿದೆ ಎಂದರು.


Spread the love

LEAVE A REPLY

Please enter your comment!
Please enter your name here