ಹುಬ್ಬಳ್ಳಿ: ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರನಗರ ಸುಡಗಾಡಗಟ್ಟಿ ಹತ್ತಿರ ಯುವಕನೋರ್ವನ ಮೇಲೆ ಪುಡಿರೌಡಿಗಳು ಭೀಕರ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
27 ವರ್ಷದ ಗಂಗಾಧರ್ ಮಡಿವಾಳರ ಹಲ್ಲೆಗೊಳಗಾದ ವ್ಯಕ್ತಿ. ಎಗ್ ರೈಸ್ ತಿನ್ನುವ ವಿಚಾರಕ್ಕೆ ಸಂಬಂಧಿಸಿದ ವಿವಾದದಲ್ಲಿ ಹಲ್ಲೆ ನಡೆಯಿತು. ಹಲ್ಲೆಗಾರರು ಅವನ ಮುಖಕ್ಕೆ ಕಲ್ಲು ಮತ್ತು ಚಾಕು ಬಳಸಿ ಗಂಭೀರವಾಗಿ ಗಾಯಪಡಿಸಿದ್ದಾರೆ.
ಹಲ್ಲೆ ನಡೆಸಿದವರಲ್ಲಿ ವಿಶಾಲ್ ಹೊಸಮನಿ, ಅವರ ಸಹೋದರ ಪ್ರವೀಣ್ ಹೊಸಮನಿ ಹಾಗೂ ಇನ್ನೂ ಐದು–ಆರು ಜನರ ಗುಂಪು ಸೇರಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡ ಗಂಗಾಧರ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಪ್ರಕರಣದ ಸಂಬಂಧ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ನಗರದ ಪುಡಿ ರೌಡಿಗಳ ಹಾವಳಿಗೆ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.



