ವಿಜಯಸಾಕ್ಷಿ ಸುದ್ದಿ, ರೋಣ: ಸಾಲ ಪಡೆದಿರುವ ಅಥವಾ ಇನ್ಯಾವುದೋ ಕಾರಣಕ್ಕೆ ಬಡವರನ್ನು ಅಗೌರವದಿಂದ ಕಾಣುವಂತಿಲ್ಲ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಅವರು ರವಿವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ರೋಣ-ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಾರಿಯ ಅಧಿವೇಶನ ಇತಿಹಾಸ ಸೃಷ್ಟಿಸುವ ಮತ್ತು ಬಡವರ ಪರವಾದ ಕಾನೂನುಗಳನ್ನು ಜಾರಿಗೆ ತರುವ ಮಹತ್ವದ ಅಧಿವೇಶನವಾಗಿದ್ದು, ಈ ಅಧಿವೇಶನದಲ್ಲಿ 26 ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಮೈಕ್ರೋ ಹಾಗೂ ಕಿರು ಸಾಲ ದೌರ್ಜನ್ಯ ತಡೆಗೆ ಕಾನೂನನ್ನು ಜಾರಿಗೆ ತಂದು ಬಡವರನ್ನು ಅಗೌರವದಿಂದ ಕಾಣುವಂತಿಲ್ಲ ಎಂದು ಎಚ್ಚರಿಸಲಾಗಿದೆ. ಇದಕ್ಕೆ ಹೈಕೋರ್ಟ್ ಸಹ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ ಎಂದರು.
ತಾ.ಪಂ, ಜಿ.ಪಂ ಚುನಾವಣೆ ಮೇ ಅಥವಾ ಜೂನ್ ತಿಂಗಳಲ್ಲಿ ನಡೆಯಲಿದ್ದು, ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಲಾಭದ ಕುರಿತು ಜನರಿಗೆ ಮನವರಿಕೆ ಮಾಡಬೇಕು. ಮುಖ್ಯವಾಗಿ ಗದಗ ಜಿಲ್ಲೆಯಲ್ಲಿ ಜಿ.ಪಂ ಹಾಗೂ ತಾ.ಪಂಗಳ ಎಲ್ಲ ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಬೇಕು ಎಂದ ಸಚಿವರು, ಡಂಬಳ ತೋಟಗಾರಿಕೆ ಕಾಲೇಜಿನ ಕೆಲಸ 3-4 ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಶಾಸಕ ಜಿ.ಎಸ್. ಪಾಟೀಲ, ಡಿ.ಬಿ. ಸೌದಾಗರ, ಮೋಹನ ಅಸುಂಡಿ, ಐ.ಎಸ್. ಪಾಟೀಲ, ಸಂಗನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಅಕ್ಷಯ ಪಾಟೀಲ, ವಿ.ಆರ್. ಗುಡಿಸಾಗರ, ಪ್ರಭು ಮೇಟಿ, ಸಿದ್ದಪ್ಪ ಬಂಡಿ, ವೀರಣ್ಣ ಶೆಟ್ಟರ, ಬಸವರಾಜ ನವಲಗುಂದ, ಯೂಸುಪ್ ಇಟಗಿ, ಬಾವಾಸಾಬ ಬೆಟಗೇರಿ, ಶಶಿಕಲಾ ಪಾಟೀಲ, ಮಂಜುಳಾ ಹುಲ್ಲಣ್ಣವರ, ರೂಪಾ ಅಂಗಡಿ, ನಾಜಬೇಗಂ ಯಲಿಗಾರ, ಸಂಗಪ್ಪ ಮೆಣಸಿನಕಾಯಿ, ರಮೇಶ ಪಲ್ಲೇದ, ಅಂದಪ್ಪ ಬಿಚ್ಚೂರ, ಆನಂದ ಚಂಗಳಿ, ಎಚ್.ಎಸ್. ಸೋಂಪುರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಸರ್ವ ಸಮಾಜದಲ್ಲಿರುವ ಬಡವರ ಪರವಾಗಿ ಕಾಂಗ್ರೆಸ್ ಪಕ್ಷ ತನ್ನ ಕೆಲಸವನ್ನು ಮಾಡುತ್ತಿದೆ. ಅವರ ಏಳ್ಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪಕ್ಷದ ಕಾರ್ಯಕರ್ತರು ಈಗಿನಿಂದಲೇ ತಾ.ಪಂ, ಜಿ.ಪಂ ಚುನಾವಣೆಗೆ ಸನ್ನದ್ಧರಾಗಬೇಕು. ಸಿಎಂ ಸಿದ್ದರಾಮಯ್ಯನವರು ಜಾರಿಗೆ ತಂದಿರುವ ಮಹತ್ವದ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಜಿಲ್ಲೆಯಲ್ಲಿರುವ ಎಲ್ಲ ತಾ.ಪಂ ಹಾಗೂ ಜಿ.ಪಂ ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಭ್ರಮ ಆಚರಿಸುವಂತಾಗಬೇಕು.
– ಜಿ.ಎಸ್. ಪಾಟೀಲ.
ಶಾಸಕರು, ರಾಜ್ಯ ಖನಿಜ ನಿಗಮದ ಅಧ್ಯಕ್ಷರು.