ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಗ್ರಾಮದಿಂದ ದೂರವಿರುವ ಮಾರುತಿ ನಗರ ಕುಟುಂಬಗಳ ಬೇಡಿಕೆಯಂತೆ ನ್ಯಾಯಬೆಲೆ ಅಂಗಡಿಯ ಪರವಾನಿಗೆಯ ನಂತರ ತಡವಾಗಿಯಾದರೂ ಆರಂಭವಾಗಿದ್ದು, ಆ ಭಾಗದ ಬಡವರಿಗೆ ಅನುಕೂಲವಾಗಲಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 2ರ ನೂತನ ಅಧ್ಯಕ್ಷ ಮಹೇಶ ಮುಸ್ಕಿನಭಾವಿ ಹೇಳಿದರು.
ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 2ರ ನೂತನ ನ್ಯಾಯಬೆಲೆ ಅಂಗಡಿ ಹಾಗೂ ಸರ್ಕಾರದಿಂದ ಬೆಂಬಲ ಬೆಲೆಯ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದಿನ ತಿಂಗಳಿನಿಂದ ಮಾರುತಿ ನಗರದ ಸಾರ್ವಜನಿಕ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಿಸಲಾಗುವುದು. ಈ ಹಿಂದೆ ಗ್ರಾಮ ಸಭೆಯ ನಿರ್ಣಯದಂತೆ ಅಭಿವೃದ್ಧಿ ಅಧಿಕಾರಿಗಳು ಖಾಲಿ ಇರುವ ನಿವೇಶನವನ್ನು ನಮ್ಮ ಸಂಘಕ್ಕೆ ಒದಗಿಸಿಕೊಡಬೇಕು. ಕಡಲೆ ಖರೀದಿಗೆ ಪ್ರತಿ ಕ್ವಿಂಟಲ್ಗೆ ಸರ್ಕಾರ 5875 ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದು, ಪ್ರತಿ ಎಕರೆಗೆ 4 ಕ್ವಿಂಟಲ್ನಂತೆ ಒಂದು ಖಾತೆಗೆ 10 ಎಕರೆವರೆಗೆ 40 ಕ್ವಿಂಟಲ್ ಖರೀದಿ ಮಾಡಲಾಗುತ್ತಿದ್ದು, ರೈತರು ಸಹಕಾರ ನೀಡಬೇಕು ಎಂದರು.
ಪಿ.ಡಿ.ಒ ಅಮೀರನಾಯಕ ಮಾತನಾಡಿ, ರೈತರ ಧ್ವನಿಯಾಗಿರುವ ಸಹಕಾರ ಸಂಘವು ಇನ್ನು ಮುಂದೆ ಬಡವರಿಗೆ ಸರ್ಕಾರ ಉಚಿತವಾಗಿ ನೀಡುವ ಆಹಾರ ಧಾನ್ಯವನ್ನು ಪೂರೈಕೆ ಮಾಡುವ ಜವಾಬ್ದಾರಿ ವಹಿಸಿಕೊಂಡಿರುವುದು ಶ್ಲಾಘನೀಯ. ಗ್ರಾಮಸಭೆಯ ನಿರ್ಣಯದಂತೆ ಸಂಘಕ್ಕೆ ಗ್ರಾಮ ಪಂಚಾಯಿತಿಯಿಂದ ನಿವೇಶನ ಒದಗಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಪರಸಪ್ಪ ಕರಿಯಲ್ಲಪ್ಪನವರ, ಲಕ್ಕುಂಡಿ ಬಿ.ಜೆ.ಪಿ ಮಂಡಲದ ಅಧ್ಯಕ್ಷ ಪ್ರಕಾಶ ಅರಹುಣಶಿ ಮಾತನಾಡಿದರು. ಹಿರಿಯರಾದ ಎ.ಬಿ. ಬಿರಾದಾರ, ನಿರ್ದೇಶಕರಾದ ಅಶೋಕ ಮುಸ್ಕಿನಭಾವಿ, ಮಲ್ಲಪ್ಪ ಹಗರಿ, ನಿಂಗಪ್ಪ ಮಂಗಳೂರು, ವಿರೂಪಾಕ್ಷಪ್ಪ ಕಮತರ, ಪಂಚಾಕ್ಷರಯ್ಯ ನಾಗಾವಿಮಠ, ಅನ್ನಪೂರ್ಣ ಹಡಗಲಿ, ಗಂಗವ್ವ ಮುಕ್ಕಣ್ಣವರ, ಕಲ್ಲಪ್ಪ ಬಣವಿ ವೇದಿಕೆಯಲ್ಲಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿ. ಬೆಣಕಲ್ ಸ್ವಾಗತಿಸಿದರು. ಬಸವರಾಜ ಮುಳ್ಳಾಳ ನಿರೂಪಿಸಿದರು. ಶಿವು ಭಜಂತ್ರಿ ವಂದಿಸಿದರು.
ಸಂಘದ ಹಿರಿಯ ಸದಸ್ಯ ಅಜ್ಜಣ್ಣ ಪಾಟೀಲ ಮಾತನಾಡಿ, ಮಾರುತಿ ನಗರದ ಜನರ ಅನುಕೂಲಕ್ಕಾಗಿಯೇ ಕಳೆದ 4 ವರ್ಷದ ಹಿಂದೆಯೇ ಜಿಲ್ಲಾಧಿಕಾರಿಗಳು ನಮ್ಮ ಸಂಘಕ್ಕೆ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡಿದ್ದರು. ಆದರೆ ಆಹಾರ ಇಲಾಖೆಯ ಅಧಿಕಾರಿಗಳ ನಿಷ್ಕಾಳಜಿಯಿಂದ ಇಲ್ಲಿಯವರೆಗೂ ಮುಂದೂಡುತ್ತಾ ಬಂದಿದ್ದು ವಿಷಾದನೀಯ. ಗ್ರಾಮದ ಅಭಿವೃದ್ಧಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಗ್ರಾಮದ ಜನರ ಕುಂದುಕೊರತೆಗಳ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.



