IPL ಮರು ಪ್ರಾರಂಭಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆರ್ಸಿಬಿ ಹಾಗೂ ಕೆಕೆಆರ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಸಂಜೆ 7:30ಕ್ಕೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಘರ್ಷಣೆಯ ಬಳಿಕ ಐಪಿಎಲ್ ಪುನರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ನಡೆಯದಂತೆ ಚಿನ್ನಸ್ವಾಮಿ ಮೈದಾನದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕೆಕೆಆರ್ ಮತ್ತು ಆರ್ಸಿಬಿ ನಡುವಿನ ಈ ಮಹತ್ವದ ಐಪಿಎಲ್ ಪಂದ್ಯಕ್ಕೆ 1,600 ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತಿದೆ. ಇದರಲ್ಲಿ ನಾಲ್ವರು ಡಿಸಿಪಿ ಅಧಿಕಾರಿಗಳು, 12 ಎಸಿಪಿ, 28 ಇನ್ಸ್ಪೆಕ್ಟರ್, 80 ಸಬ್ ಇನ್ಸ್ಪೆಕ್ಟರ್ ಸೇರಿ 1600 ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ ಕ್ಯೂಆರ್ಟಿ, ವಾಟರ್ ಜೆಟ್, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ನಿಯೋಜನೆ ಮಾಡಲಾಗಿರುತ್ತದೆ. 4 ಕೆಎಸ್ಆರ್ಪಿ ತುಕಡಿ, ಹೋಂಗಾರ್ಡ್ಸ್ ಕೂಡ ಭದ್ರತೆ ನೀಡಲಿದ್ದಾರೆ.
ಪಂದ್ಯ ಶುರುವಾಗುವ ಮೊದಲೇ ಪ್ರತಿ 2 ಗಂಟೆಗಳಿಗೊಮ್ಮೆ ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ನಿಂದ ತಪಾಸಣೆ ನಡೆಸಲಾಗುತ್ತದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯದ ಉದ್ವಿಗ್ನತೆಯಿಂದ ಒಂದು ವಾರ ಮುಂದೂಡಿಕೆ ಆಗಿದ್ದ ಐಪಿಎಲ್ ಚಿನ್ನಸ್ವಾಮಿಯಲ್ಲಿ ಆರಂಭವಾಗುತ್ತಿದೆ. ನಕಲಿ ಟಿಕೆಟ್ಗೂ ಬ್ರೇಕ್ ಹಾಕಲಾಗುತ್ತದೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಲಿನ ರಸ್ತೆಗಳಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.