ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಅರಮನೆ ಅವರಣದಲ್ಲಿ ವಿಶೇಷ ರಿಹರ್ಸಲ್ ನಡೆಯಿತು. ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಯ ಅಂಬಾರಿ ಆನೆಗೆ ಪುಷ್ಪಾರ್ಚನೆ ಸೇರಿದಂತೆ ಮೆರವಣಿಗೆಯ ತಾಲೀಮು ನಡೆಸಲಾಯಿತು.
ಇದೇ ಗುರುವಾರ ಜಂಬೂಸವಾರಿ ನಡೆಯಲಿದ್ದು ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಕ್ಯಾಪ್ಟನ್ ಅಭಿಮನ್ಯು ಹಾಗೂ ಕುಮ್ಕಿ ಆನೆಗಳಾದ ರೂಪಾ ಹಾಗೂ ಕಾವೇರಿ ಆನೆಗಳು ರಾಜವಂಶಸ್ಥರ ನಿವಾಸಕ್ಕೆ ಸೆಲ್ಯೂಟ್ ಹೊಡೆಸಿ ತ್ರಿನೇಶ್ವರಸ್ವಾಮಿ ದೇವಲಯದ ಬಳಿಯಿಂದ ಜಯಮಾರ್ತಾಂಡ ದ್ವಾರದ ಮುಂಭಾಗ ಹಾದು ವರಹಾಸ್ವಾಮಿ ದೇವಾಲಯದ ಪಕ್ಕದ ರಸ್ತೆಯಿಂದ ಪುಷ್ಪರ್ಚನೆ ಮಾಡುವ ಸ್ಥಳಕ್ಕೆ ಕರೆತರಲಾಯಿತು.
ಅಧಿಕಾರಿಗಳು ಅಂಬಾರಿ ಆನೆಯ ಮೇಲೆ ಪುಷ್ಪರ್ಚನೆ ಮಾಡಿದರು ಈ ವೇಳೆ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಿದರು. ರಾಷ್ಟ್ರ ಗೀತೆ ಶುರುವಾಗುತ್ತಿದ್ದಂತೆ ಕೋಟೆ ಮಾರಮ್ಮ ದೇವಾಲಯದ ಬಳಿ ಫಿರಂಗಿ ದಳದ ಸಿಬ್ಬಂದಿ ಏಳು ಫಿರಂಗಿ ಬಳಸಿ ತಲಾ ಮೂರು ಸುತ್ತನಂತೆ ಒಂದೇ ನಿಮಿಷದಲ್ಲಿ 21 ಬಾರಿ ಕುಶಾಲತೋಪು ಸಿಡಿಸಲಾಯಿತು.
ನಂತರ ಅಂಬಾರಿ ಹೊತ್ತ ಆನೆ ಕುಮ್ಕಿ ಆನೆಗಳೊಂದಿಗೆ ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ದ್ವಾರದ ವರೆಗೂ ಸಾಗಿತು ಈ ವೇಳೆ ಅಶ್ವಪಡೆ,ಪೊಲೀಸ ಬ್ಯಾಂಡ್ ವಾದನದ ತಂಡ ಪಥಸಂಚಲನದ ಪೊಲೀಸ ತಂಡ ಸಹ ಹೆಜ್ಜೆ ಹಾಕಿದವು ಮೊದಲ ಜಂಬೂಸವಾರಿ ತಾಲೀಮು ಯಶ್ವಸಿಯಾಗಿಯೂ ಕರಾರುವಕ್ಕಾಗಿಯೂ ನಡೆಯಿತು.



