ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು : ರಂಭಾಪುರಿ ಶ್ರೀಗಳು

0
rambhapuri
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು. ದೇಶ ಉಳಿದರೆ ಧರ್ಮ ಸಂಸ್ಕೃತಿ ಉಳಿದು ಬರಲು ಸಾಧ್ಯ. ದೇವರ ಮೇಲಿನ ನಂಬಿಕೆ ಬಾಳಿಗೆ ಶಾಶ್ವತ ಆಶಾದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಪಾಲಿಕೊಪ್ಪ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಮತ್ತು ಶ್ರೀ ಕರಿಯಮ್ಮದೇವಿ ನೂತನ ದೇವಸ್ಥಾನದ ಲೋಕಾರ್ಪಣೆ, ನೂತನ ಗೋಪುರ ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ, ಶ್ರೀ ನಂದೀಶ್ವರ ಸ್ವಾಮಿ ಮಹಾರಥೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರು. ಆಧುನಿಕ ಯುಗದಲ್ಲಿ ಪ್ರಗತಿಪರ ವಿಚಾರ ಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶ ಮಾಡುವ ಸಂಚು ನಡೆಯುತ್ತಿದೆ. ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನ ಸಾರ್ಥಕ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಧರ್ಮ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ ಮತ್ತು ಧ್ಯಾನ ಎಂಬ ದಶಸೂತ್ರಗಳು ಎಲ್ಲರ ಬಾಳಿಗೆ ದಾರಿದೀಪ.
ವೀರಶೈವ ಧರ್ಮ ಕಾಯಕ ಮತ್ತು ದಾಸೋಹದ ಮೂಲಕ ಭಾವೈಕ್ಯತೆ ಸಾಮರಸ್ಯ ಬೆಳೆಸಲು ಪ್ರಯತ್ನಿಸಿದೆ. ಶುದ್ಧ ಹೃದಯವು ಭಗವಂತನ ದರ್ಶನಕ್ಕೆ ಹೋಗುವ ಹೆಬ್ಬಾಗಿಲು. ಮನುಷ್ಯನಲ್ಲಿರುವ ಅಸುರೀ ಗುಣಗಳು ನಾಶವಾಗಿ ದೈವೀ ಗುಣಗಳು ಬಲಗೊಳ್ಳಬೇಕು. ಪ್ರಾಪಂಚಿಕ ಸ್ನೇಹ ಸಂಬಂಧಗಳು ಕಾಲಾಂತರದಲ್ಲಿ ಶಿಥಿಲಗೊಳ್ಳಬಹುದು. ಆದರೆ ಗುರು ಶಿಷ್ಯರ ಸಂಬಂಧ ನಿರಂತರ ಮತ್ತು ಚಿರಂತನವಾದುದು.
ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಸಾರಿದ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಎಂದೆಂದಿಗೂ ಪ್ರಸ್ತುತವಾಗಿದೆ. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಸಮಾಧಾನ ತಂದಿದೆ ಎಂದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು. ಕಲಾದಗಿಯ ಗಂಗಾಧರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
ಶಿವಾನಂದಸ್ವಾಮಿ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ದೇವನಗೌಡ ಪಾಟೀಲ, ಗಂಗನಗೌಡ ಪಾಟೀಲ, ಶಿವನಗೌಡ ಧರ್ಮಗೌಡ್ರ, ನಾಗರಾಜ ಅಂಗಡಿ, ಶ್ರೀಕಂಠಗೌಡ್ರು ಹಿರೇಗೌಡ್ರ, ಮುದಕಪ್ಪ ಹರಕುಣಿ, ಬಿ.ಸಿ.ಕರಿಯಣ್ಣನವರ, ಭರಮಪ್ಪ ಮುಗಳಿ, ಸಿ.ವೈ.ಹಿರೇಗೌಡ್ರ, ಚನ್ನಪ್ಪ ಕಮಡೊಳ್ಳಿ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಭಾವೈಕ್ಯತೆಗೆ ಸಾಕ್ಷಿ
ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿAದ ಜರುಗಿತು. ಕಳಸ ಕನ್ನಡಿಯೊಂದಿಗೆ ಸುಮಂಗಲೆಯರು, ಪೂರ್ಣ ಕುಂಭ ಹೊತ್ತ ಮಹಿಳೆಯರು ಮಂಗಲ ವಾದ್ಯ ಸೇರಿದಂತೆ ವಿವಿಧ ವಾದ್ಯ ತಂಡಗಳು ಭಾಗವಹಿಸಿದ್ದರು. ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಮುಸ್ಲೀಂ ಮಹಿಳೆಯರು ಭಾಗವಹಿಸಿದ್ದು ಭಾವೈಕ್ಯತೆಗೆ ಸಾಕ್ಷಿಯಾಯಿತು.

Spread the love
Advertisement

LEAVE A REPLY

Please enter your comment!
Please enter your name here