ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಮ್ಮ ಸುತ್ತಲೂ ಘಟಿಸುತ್ತಿರುವ ಅನೇಕ ದುರ್ಘಟನೆಗಳನ್ನು ಕಂಡೂ ಕಾಣದಂತಿರುತ್ತೀರಿ. ಇಲ್ಲದ ಉಸಾಬರಿ ನಮಗೇಕೆ ಬೇಕು ಎಂದು ಉದಾಸೀನ ಮನೋಭಾವ ತೋರುತ್ತೀರಿ. ಇದರಿಂದ ಅಪರಾಧಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಅಪರಾಧಿಗಳು ಪಾರಾಗುತ್ತಾರೆ. ಇದನ್ನು ತಪ್ಪಿಸಬೇಕಾದರೆ ನಿಮ್ಮ ಸಹಕಾರ ಅತ್ಯಗತ್ಯ ಎಂದು ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್ಐ ಐಶ್ವರ್ಯ ನಾಗರಾಳ ಹೇಳಿದರು.
ಪಟ್ಟಣದ ಎಸ್ಕೆಆರ್ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನರೇಗಲ್ಲ ಪೊಲೀಸ್ ಇಲಾಖೆಯಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಸ್ತುತ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ಮುಂಜಾಗ್ರತೆ ವಹಿಸಿದರೆ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಕಂಡೂ ಕಾಣದಂತೆ ಹೋಗುವುದು ಅಪರಾಧಗಳನ್ನು ಮತ್ತು ಅಪರಾಧಿಗಳನ್ನು ಪ್ರೋತ್ಸಾಹಿಸಿದಂತೆ ಎಂದರು.
ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡಬೇಕು. ಯಾರಾದರೂ ಮನೆ ಬಾಗಿಲು ತಟ್ಟಿದಾಗ, ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡ ನಂತರ ವ್ಯವಹರಿಸಬೇಕು. ಅಪರಿಚಿತರು ಮನೆ ಬಳಿ ಬಂದು ನೀರು, ವಿಳಾಸ ಇತ್ಯಾದಿ ಕೇಳಲು ಬಂದಾಗ ಜಾಗ್ರತೆಯಿಂದ ವರ್ತಿಸಬೇಕು. ಕಿಟಕಿ ಮತ್ತು ಬಾಗಿಲು ಪಕ್ಕ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ನಿಮ್ಮ ಸಂಪತ್ತು ಅಪರಾಧಗಳಿಗೆ ಪ್ರಚೋದನೆ ನೀಡದಿರಲಿ. ಮೈ ಮೇಲೆ ಒಡವೆಗಳನ್ನು ಧರಿಸಿ ತಿರುಗಾಡುವ ಪರಿಪಾಠವನ್ನು ಆದಷ್ಟು ತಪ್ಪಿಸಿ. ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ, ಜೆ.ಎಂ. ಜೋಶಿ, ಎಂ.ವಿ. ಜಾಧವ, ಬಿ.ಟಿ. ತಾಳಿ, ಮಾರ್ಥಾಂಡ ಉಪ್ಪಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಶಾಲೆಯ ಸಿಬ್ಬಂದಿಗಳು ಇದ್ದರು.
ಅಪರಾಧ ಮಾಡುವುದು ಎಷ್ಟು ತಪ್ಪೋ, ಅಪರಾಧಗಳನ್ನು ಮುಚ್ಚಿಡುವುದೂ ಸಹ ಅಷ್ಟೇ ತಪ್ಪು. ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಮುಖ್ಯವಾಗಿರುತ್ತದೆ. ಕಿಡಿಗೇಡಿಗಳು ನಿಮಗೇನಾದರೂ ಕಿರುಕುಳ ನೀಡಿದರೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಪಿಎಸ್ಐ ಐಶ್ವರ್ಯ ನಾಗರಾಳ ತಿಳಿಸಿದರು.