ಬೆಂಗಳೂರು: ಯೋಗೇಶ್ವರ್ ನಮ್ಮ ಪಕ್ಷಕ್ಕೆ ಬಂದಿರುವುದು ಒಳ್ಳೆಯದು. ಆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ ಎಂದು ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ಅವರನ್ನು ಕಾಂಗ್ರೆಸ್ಸಿಗೆ ಸ್ವಾಗತ ಮಾಡುತ್ತೇನೆ. ಹೈಕಮಾಂಡ್ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಇದು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ದೊಡ್ಡ ಶಕ್ತಿಯನ್ನು ಕೊಡುತ್ತದೆ.
ಯೋಗೇಶ್ವರ್ ಕ್ಷೇತ್ರದಲ್ಲಿ ಬಹಳ ಉತ್ತಮ ಕೆಲಸ ಮಾಡಿದ್ದಾರೆ. ಜನಪರವಾಗಿ ಅವರಿಗೆ ಒಳ್ಳೆಯ ಅಭಿಪ್ರಾಯವಿದೆ. ನಮ್ಮ ಪಕ್ಷಕ್ಕೆ ಅವರು ಬಂದಿರುವುದು ಒಳ್ಳೆಯದು. ಆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ ಎಂದರು. ಯೋಗೇಶ್ವರ್ ಕಾಂಗ್ರೆಸ್ಸಿಗೆ ಅನಿವಾರ್ಯತೆನಾ ಎಂಬ ವಿಚಾರವಾಗಿ ಮಾತನಾಡಿದ ಗೃಹಸಚಿವರು, ಆ ರೀತಿ ಪ್ರಶ್ನೆ ಬರಲ್ಲ, ನಾವು ಕ್ಷೇತ್ರವನ್ನು ಗೆಲ್ಲಬೇಕು. ರಣನೀತಿ ಮಾಡಬೇಕು.
ಯಾವ ರೀತಿ ರಣನೀತಿ ಮಾಡಬೇಕೋ, ಅದನ್ನು ನಮ್ಮ ಅಧ್ಯಕ್ಷರು ಮಾಡಿದ್ದಾರೆ. ಡಿಕೆಶಿ ಸಹೋದರ ಸುರೇಶ್ ಅವರ ಲೋಕಸಭಾ ವ್ಯಾಪ್ತಿಗೆ ಬರುತ್ತೆ. ಪಕ್ಷದ ಹಿತದೃಷ್ಟಿಯಿಂದ ಕರೆದುಕೊಂಡಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತನು ಡಿಕೆಶಿ ಅವರಿಗೆ ಪರಿಚಯ ಇರೋದ್ರಿಂದ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದಾರೆ. ಅನಿವಾರ್ಯತೆ ಅನ್ನುವುದಕ್ಕಿಂತ ಇವತ್ತಿನ ಪರಿಸ್ಥಿತಿಗೆ ಅವಶ್ಯಕ ಎಂದು ಹೇಳಿದರು.