ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪುಣ್ಯಾರಾಧನೆಯ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಶ್ರೀಮಠದಲ್ಲಿ ಶುಕ್ರವಾರ ಶ್ರೀ ವೀರಪ್ಪಜ್ಜನವರ ತೊಟ್ಟಿಲೋತ್ಸವವು ಸಡಗರ, ಸಂಭ್ರಮಗಳಿಂದ ನಡೆದು ಭಕ್ತರ ಹೃನ್ಮನಗಳನ್ನು ತುಂಬಿತು. ಪ್ರವಚನಕಾರ ಡಾ. ವಿಶ್ವನಾಥ ಮಹಾಸ್ವಾಮಿಗಳು ಶ್ರೀ ವೀರಪ್ಪಜ್ಜನವರ ಜನನದ ಬಗ್ಗೆ ಹೇಳುತ್ತಿದ್ದಂತೆ ಸುಮಂಗಲೆಯರು ಶ್ರೀ ವೀರಪ್ಪಜ್ಜನವರನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕುಷ್ಟಗಿಯ ಶ್ರೀ ಮದ್ದಾನೇಶ್ವರ ಮಠದ 108 ಶ್ರೀ ಕರಿಬಸವ ಶಿವಾಚಾರ್ಯರು, ಮಾನವರಾಗಿ ಹುಟ್ಟಿ ಮಹಾದೇವನ ಸ್ಥಾನವನ್ನು ಗಳಿಸಿಕೊಂಡವರು ಶ್ರೀ ವೀರಪ್ಪಜ್ಜನವರು. ಭಕ್ತರ ಮನದಲ್ಲಿ ಗದ್ದುಗೆಯನ್ನು ನಿರ್ಮಿಸಿ ತಮ್ಮ ಸ್ಥಾನವನ್ನು ಭಕ್ತರ ಮನದಲ್ಲಿ ಸ್ಥಿರ ಮಾಡಿಕೊಂಡ ಮಹಾಮಹಿಮರು. ಅವರನ್ನು ಕಾಣುವ ಸೌಭಾಗ್ಯ ನಮಗಿಲ್ಲದೆ ಹೋದರೂ, ಅವರ ಪುಣ್ಯಾರಾಧನೆಯ ಶತಮಾನೋತ್ಸವವನ್ನು ಆಚರಿಸುವ ಭಾಗ್ಯ ನಮಗೆ ದೊರಕಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಶ್ರೀ ವೀರಪ್ಪಜ್ಜನವರದು ಹೂವಿನಂತಹ ಬದುಕು. ಹೂವು ಒಂದು ದಿನವಷ್ಟೆ ಬದುಕಿ ಭಗವಂತನ ಮುಡಿಗೆ ಏರುವ ಮೂಲಕ ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತದೆ. ಹಾಗೆಯೇ ಶ್ರೀ ವೀರಪ್ಪಜ್ಜನವರೂ ಸಹ ನಮಗೆ ಕಷ್ಟಪಟ್ಟವರಂತೆ ಕಂಡರೂ ಆ ಕಷ್ಟದಲ್ಲಿಯೇ ಸುಖವನ್ನು ಕಂಡು, ನೋವನ್ನು ಉಂಡು ಪರಮ ಪದವಿಯನ್ನು ಗಳಿಸಿದ ಮಹಾ ಪುರುಷರು. ನಾವೂ ಸಹ ಅವರಂತೆಯೆ ನಮ್ಮ ಬದುಕನ್ನು ಸಾಧಿಸಲು ಕಲಿಯಬೇಕು ಎಂದು ಹೇಳಿದರು.
ಟ್ರಸ್ಟ್ ಕಮಿಟಿಯ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ ಅಧ್ಯಕ್ಷತೆ ವಹಿಸಿದ್ದರು. ಅಮೃತೇಶ ಅಣ್ಣಿಗೇರಿಮಠ ಸ್ವಾಗತಿಸಿದರು. ಶಿಕ್ಷಕ ವಿ.ಎ. ಕುಂಬಾರ ನಿರೂಪಿಸಿದರು. ಡಾ. ಆರ್.ಕೆ. ಗಚ್ಚಿನಮಠ ವಂದಿಸಿದರು.