ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ವಿದ್ಯಾರ್ಥಿ ಜೀವನದಲ್ಲಿ ಸಮಯ, ಶಿಸ್ತು, ಶ್ರದ್ಧೆ, ಸತತಾಭ್ಯಾಸ ರೂಢಿಸಿಕೊಂಡಾಗ ಭವಿಷ್ಯತ್ತಿನಲ್ಲಿ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರ ಪಾತ್ರ ಮಹತ್ವಾದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಹೇಳಿದರು.
ಅವರು ಸೋಮವಾರ ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ಸ್ಪೆಕ್ಟ್ರಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 30ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ದೇಶದ ಸಂಪತ್ತಾಗಿದ್ದರಿಂದ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಉತ್ತಮ ಪ್ರಜೆಗಳ ತಯಾರಿಯು ನಮ್ಮೆಲ್ಲರ ಕಾರ್ಯವಾಗಿದೆ ಎಂದರು.
ಸAಸ್ಥೆಯ ಕಾರ್ಯದರ್ಶಿ ಲೋಹಿತ ನೆಲವಿಗಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳಿ. ನಮ್ಮ ಜೀವನದ ರೂವಾರಿಗಳು ನಾವೇ ಆಗಿದ್ದೇವೆ. ಬದಲಾಗಿ ನಮಗೆ ಚಿತ್ರನಟರು, ಕ್ರೀಕೆಟ್ ಆಟಗಾರರು, ರಾಜಕೀಯ ವ್ಯಕ್ತಿಗಳಲ್ಲ. ನಮ್ಮ ತಂದೆ ತಾಯಿ, ಪಾಲಕರು ಹಾಗೂ ಗುರುಗಳೆ ನಮಗೆ ರೋಲ್ ಮಾಡೆಲ್ಗಳು ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಶ್ರದ್ಧೆ, ಸತತ ಅಭ್ಯಾಸದಿಂದ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಹೆತ್ತವರು ಮತ್ತು ಗುರುಗಳಿಗೆ ಕೀರ್ತಿ ತರಬೇಕು. ಮಕ್ಕಳನ್ನು ಸಮಾಜದ ಸಂಪತ್ತಾಗಿಸಲು ಸಂಸ್ಥೆಯು ವಿಶೇಷ ಜವಾಬ್ದಾರಿಯನ್ನು ತೆಗೆದುಕೊಂಡು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಕಾರ್ಯದಡಿಯಲ್ಲಿ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಇದೀಗ ಎಲ್ಲೆಡೆ ಪರೀಕ್ಷೆಗಳು ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು ಓದಿನೆಡೆ ವಿಶೇಷ ಆದ್ಯತೆ ನೀಡಿ ಯಶಸ್ಸು ಗಳಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಲತಾದೇವಿ ನೆಲವಿಗಿ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ, ಸಂಸ್ಥೆಯ ನಿರ್ದೇಶಕರಾದ ಡಾ. ರೇವತಿ ನೆಲವಿಗಿ, ಶಿಲ್ಪಾ ನೆಲವಿಗಿ, ತಾಲೂಕಾ ದೈಹಿಕ ಪರೀಕ್ಷಾಣಾಧಿಕಾರಿ ಎನ್.ಎಂ. ಹವಳದ, ಬಿಆರ್ಪಿ ಈಶ್ವರ ಮೆಡ್ಲೇರಿ, ಸಿಆರ್ಪಿ ಉಮೇಶ ನೇಕಾರ, ಕಾರ್ಯಕ್ರಮದ ಉಸ್ತುವಾರಿ ಹಾಗೂ ಆಡಳಿತಾಧಿಕಾರಿ ನಾಗರಾಜ ಯಂಡಿಗೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಿರುತೆರೆಯ ಹಾಸ್ಯ ನಟರಾದ ಗಿಲ್ಲಿ ನಟ, ವಾಣಿಗೌಡ, ಅಪ್ಪಣ್ಣ ಅವರು ನೀಡಿದ ವಿಶೇಷ ಹಾಸ್ಯ ಕಾರ್ಯಕ್ರಮಗಳು ಆಗಮಿಸಿದ್ದ ಸಾವಿರಾರು ಪಾಲಕರು ಮತ್ತು ಮಕ್ಕಳಿಗೆ ರಸದೌತಣ ನೀಡಿತು. ಸುಮಾರು 2 ಗಂಟೆಗಳ ಕಾಲ ವಿಶೇಷವಾದ ಹಾಸ್ಯ ಪ್ರಸಂಗಗಳು ನಗೆಗಡಲಲ್ಲಿ ತೇಲುವಂತೆ ಮಾಡಿತು.