ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮ ಸಂವಿಧಾನವು ಕೊಡಮಾಡಿದ ಮತದಾನ ಹಕ್ಕನ್ನು ಪ್ರತಿ ಮತದಾರನೂ ಚಲಾಯಿಸಿ ಸದೃಢ ಭಾರತ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಾಗಲೇ ಅವನೊಬ್ಬ ‘ನಿಜ ಪ್ರಜೆ’ ಅಥವಾ ‘ನಿಜ ಭಾರತೀಯ’ ಎನಿಸಿಕೊಳ್ಳಲು ಸಾಧ್ಯವೆಂದು ಸ್ಟೂಡೆಂಟ್ ಎಜುಕೇಶನ್ ಸಂಸ್ಥೆಯ ಚೆರಮನ್ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಗರದ 35ನೇ ವಾರ್ಡಿನಲ್ಲಿ ಕೈಗೊಂಡ ‘ಮತದಾನಜಾಗೃತಿ ರ್ಯಾಲಿ’ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾನ ಪ್ರಾಮುಖ್ಯತೆಯನ್ನು ಇತರರಿಗೂ ತಿಳಿಸಿಕೊಟ್ಟು ಕಡ್ಡಾಯ ಮತದಾನ ಮಾಡಲು ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ, ಅಕ್ಕಪಕ್ಕದ ಜನರಿಗೆ ಜಾಗೃತಿ ನೀಡಲು ಸಲಹೆ ನೀಡಿದರು.
ಪ್ರಾಚಾರ್ಯ ಪ್ರೊ. ಉಡುಪಿ ದೇಶಪಾಂಡೆ ಮಾತನಾಡಿ, ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೇ, ಯಾವುದೇ ಪಕ್ಷ, ವ್ಯಕ್ತಿಯ ಪ್ರಚೋದನೆಗೆ ಒಳಗಾಗದೇ ಜಾತಿ, ಮತ, ಕುಲ ಧರ್ಮಾಂಧತೆಯ ಮೌಢ್ಯತೆಯಲ್ಲಿ ಬೀಳದೆ ಮತದಾನ ಮಾಡಿದಾಗ ಅದು ಪವಿತ್ರ ಎನಿಸಿಕೊಳ್ಳುತ್ತದೆ. ನಾಡಾಭಿಮಾನ, ದೇಶಾಭಿಮಾನ, ನೆಲ ಜಲ ಉಳಿವಿಗೆ, ದೇಶಾಭಿವೃದ್ಧಿಗೆ ಶ್ರಮಿಸುವ ಸಮರ್ಥ ನಾಯಕರನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕನ್ನಡ ಉಪನ್ಯಾಸಕ ಪ್ರೊ. ಹೇಮಂತ ದಳವಾಯಿಯವರ ನೇತೃತ್ವದಲ್ಲಿ ಜರುಗಿದ ರ್ಯಾಲಿಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಪ್ರೊ. ರೋಹಿತ ಒಡೆಯರ್, ರಾಹುಲ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ, ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.