ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಮಾದ್ಯಮ ಅಕಾಡಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಸುಳ್ಳುಸುದ್ದಿ ಸಾಮಾಜಿಕನ್ಯಾಯದ ಮೇಲೆ ಪರಿಣಾಮ’ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು,
ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿವೆ. ಸುಳ್ಳು ಸುದ್ದಿಗಳಿಂದಾಗಿಯೇ ಕೋಮು ಗಲಭೆಗಳು ನಡೆದು, ಜನರ ಜೀವಕ್ಕೂ ಅಪಾಯ ಎದುರಾಗಿವೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ನೈಜ ಹಾಗೂ ಸುಳ್ಳು ಸುದ್ದಿಗಳ ನಡುವಿನ ವ್ಯತ್ಯಾಸ ಸುಲಭಕ್ಕೆ ನಿಲುಕದಂತಾಗಿದೆ. ಸತ್ಯವಲ್ಲದ ಸುದ್ದಿಗಳನ್ನು ನಂಬಿ ಕೆಲವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಾರೆ’ ಎಂದರು.
‘ಮುಂದಿನ 20-30 ವರ್ಷಗಳಲ್ಲಿ ದೇಶದ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಗಳಲ್ಲಿನ ಚಿನ್ನವನ್ನೂ ಕಿತ್ತುಕೊಳ್ಳುತ್ತಾರೆ ಎಂಬುದೂ ಸೇರಿದಂತೆ ಹಲವು ತಪ್ಪು ಮಾಹಿತಿಗಳನ್ನು ಬಿತ್ತುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇಂತಹ ಸುದ್ದಿಗಳನ್ನು ಕುರುಡಾಗಿ ನಂಬಿ ವಾಟ್ಸಪ್, ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೊದಲು ಸತ್ಯಾನ್ವೇಷಣೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಕಳೆದ 10 ವರ್ಷಗಳಿಂದ ಈಚೆಗೆ ತಪ್ಪು ಮಾಹಿತಿ ಹರಡುವ ಪ್ರವೃತ್ತಿ ವೇಗವಾಗಿದೆ. ಕೋಲಾಹಲ ಸೃಷ್ಟಿಸುವ ಸುದ್ದಿಗಳಿಗೆ ಒಲವು ತೋರಿದ್ದಾರೆ. ಕೆಲ ಮಾಧ್ಯಮಗಳೂ ಅಂತಹ ಸುದ್ದಿಗಳ ಬೆನ್ನು ಬೀಳುತ್ತಿವೆ. ಮುದ್ರಣ, ರೇಡಿಯೊ, ದೃಶ್ಯ ಮಾಧ್ಯಮಗಳ ವಿಶ್ವಾಸಾರ್ಹ ಸುದ್ದಿಗಳನ್ನೂ ನಂಬದ ಸ್ಥಿತಿಗೆ ಸಮಾಜ ತಲುಪಿದೆ’ ಎಂದರು.