ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬಂತೆ ಪ್ರಸ್ತುತ ಬೆಲೆ ಏರಿಕೆಯ ಕಾಲಘಟ್ಟದಲ್ಲಿ ಬದುಕಿನ ಬಂಡಿ ಸರಾಗವಾಗಿ ಸಾಗಲು ಮಹಿಳೆಯರೂ ಕೂಡ ಸ್ವಂತ ಉದ್ಯೋಗ, ಸೃಜನಶೀಲತೆ ರೂಢಿಸಿಕೊಂಡರೆ ಸ್ವಾವಲಂಬಿ ಬದುಕಿಗೆ ಆಸರೆಯಾಗುತ್ತದೆ ಎಂದು ಸೇವಾಮಿತ್ರ ಯೋಜನೆಯ ರಾಜ್ಯ ಸಂಯೋಜಕ ನಟರಾಜ ರಾನಡೆ ಅಭಿಪ್ರಾಯಪಟ್ಟರು.
ಪಟ್ಟಣದ ಹಿಂದೂ ಸೇವಾ ಪ್ರತಿಷ್ಠಾನದಿಂದ ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನೇರವೇರಿಸಿ ಮಾತನಾಡಿದ ಅವರು, ಹಿಂದೂ ಸೇವಾ ಪ್ರತಿಷ್ಠಾನ ಕಳೆದ 40 ವರ್ಷಗಳಿಂದ ಸೇವಾ ಚಟುವಟಿಕೆ ಮಾಡುತ್ತಿದ್ದು, ಈವರೆಗೆ ಸಾವಿರಾರು ಯುವಕ-ಯುವತಿಯರಿಗೆ ಸೇವಾ ಪ್ರಶಿಕ್ಷಣ, ಸ್ವಯಂ ಉದ್ಯೋಗ ತರಬೇತಿ, ಪ್ರೇರಣೆ ನೀಡಿದೆ. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಎರಡು ಸಾವಿರ ಮಹಿಳೆಯರಿಗೆ ಉಚಿತ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಡಾ. ಶರಣಪ್ಪ ಬಿಂಕದಕಟ್ಟಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಅದಕ್ಕಾಗಿ ಅವರು ಹೊಲಿಗೆ ತರಬೇತಿಯಂತಹ ಸ್ವಂತ ಉದ್ಯೋಗಗಳ ತರಬೇತಿ ಪಡೆದುಕೊಳ್ಳಬೇಕು ಎಂದರು. ಅಪ್ಪಾಜಿ ಮಕ್ಕಳ ಬಳಗದ ಮುಖ್ಯಸ್ಥೆ ಹೇಮಾ ಬಾಳಿಕಾಯಿ ಮಾತನಾಡಿ, ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಹಣದ ಮಹತ್ವ, ದುಡಿಮೆಯ ಕಷ್ಟ, ಬದುಕಿನ ಮೌಲ್ಯ, ಸಂಸ್ಕಾರವನ್ನು ಕೊಟ್ಟರೆ ನಮ್ಮ ಸಮಾಜ ಸುಧಾರಸುತ್ತದೆ ಎಂದು ಹೇಳಿದರು.
ವಕೀಲರಾದ ನಂದಾ ಅಮಾಸಿ, ಲಕ್ಷ್ಮೀ ಓದು ಮಾತನಾಡಿದರು. ತರಬೇತಿ ನೀಡಿದ ಶಿಕ್ಷಕಿ ರುಕ್ಮಿಣಿ ಕಾಕಡೆ ಅವರನ್ನು ಸನ್ಮಾನಿಸಲಾಯಿತು. ಶಂಕರ ಬ್ಯಾಡಗಿ, ಖುಷಿ ಕ್ಷತ್ರಿ, ಚೇತನ ಯಲಿಗಾರ ನಿರೂಪಿಸಿದರು.