ವಿಜಯಸಾಕ್ಷಿ ಸುದ್ದಿ, ಗದಗ : ಮುಂದುವರೆದ ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚತೊಡಗಿದ್ದು, ಪ್ರತಿನಿತ್ಯ ಒಂದಿಲ್ಲೊಂದು ಹೊಸ ವಿಧದ ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಈ ಹಿಂದೆ ಮಹಾನಗರಗಳನ್ನಷ್ಟೇ ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಇಂತಹ ವಂಚನೆಗಳು ಇಂದು ಸಣ್ಣ ಹಳ್ಳಿಗಳಲ್ಲಿಯೂ ನಡೆಯುತ್ತಿರುವುದು ಸೈಬರ್ ವಂಚನೆಯ ವಿರಾಟ್ ರೂಪವನ್ನು ಸಾರುತ್ತವೆ. ಇದಕ್ಕೆ ಗದಗ-ಬೆಟಗೇರಿ ಅವಳಿ ನಗರವೂ ಹೊರತಾಗಿಲ್ಲ.
ವಾಟ್ಸಪ್, ಪೋನ್ ಕರೆ, ಲಿಂಕ್ ಮೆಸೇಜ್ಗಳ ಮೂಲಕ ಅವಳಿ ನಗರದ ಅದೆಷ್ಟೋ ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ಪ್ರತಿನಿತ್ಯ ದಾಖಲಾಗುವ ಪ್ರಕರಣಗಳು ಪೊಲೀಸ್ ಇಲಾಖೆಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೈಬರ್ ವಂಚಕರ ಮೋಸದಾಟಕ್ಕೆ ವಿದ್ಯಾವಂತರೇ ಬಲಿಯಾಗುತ್ತಿದ್ದು, ಕ್ಷಣಮಾತ್ರದಲ್ಲಿ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳೆದದುಕೊಳ್ಳುತ್ತಿದ್ದಾರೆ. ವಂಚಕರು ಯಾವುದೋ ರಾಜ್ಯದ ಯಾವುದೋ ಅಜ್ಞಾತ ಸ್ಥಳದಲ್ಲಿ ಕುಳಿತು ತಮ್ಮ ಕೈಚಳಕ ತೋರುತ್ತಿರುವುದರಿಂದ ಸೈಬರ್ ಕ್ರೈಂ ದೂರು ದಾಖಲಿಸಿದರೂ ಹಣ ಮರಳಿ ಪಡೆಯುವುದು ಕಷ್ಟಸಾಧ್ಯವಾಗಿದೆ.
ಇನ್ನು ರಾಜಕೀಯ ಮುಖಂಡರು, ಸೆಲೆಬ್ರಿಟಿಗಳು, ಸರ್ಕಾರಿ ಅಧಿಕಾರಿವರ್ಗದವರೂ ಈ ಮೋಸದಿಂದ ಹೊರತಾಗಿಲ್ಲ. ಪೊಲೀಸ್ ಠಾಣೆ, ಕೋರ್ಟ್ ಜಂಜಾಟದಿಂದ ತಪ್ಪಿಸಿಕೊಳ್ಳಲು ದೂರು ನೀಡದೇ, ತಮ್ಮ ಹಣೆಬರಹವನ್ನ ಶಪಿಸಿಕೊಳ್ಳುತ್ತಿರುವವರ, ಬೆಳಕಿಗೆ ಬಾರದ ಪ್ರಕರಣಗಳ ಸಂಖ್ಯೆಯೂ ಅಷ್ಟೇ ದೊಡ್ಡದಿದೆ.
ಪೊಲೀಸ್ ಇಲಾಖೆ ಸೈಬರ್ ವಂಚನೆ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ, ಜನಸಾಮಾನ್ಯರು ಇನ್ನೂ ಎಚ್ಚೆತ್ತುಕೊಂಡಂತಿಲ್ಲ. ಪೊಲೀಸ್ ಇಲಾಖೆಯೂ ಸೈಬರ್ ಕ್ರೈಂ ವಿರುದ್ಧ ದಿಟ್ಟ ಕ್ರಮ ಅನುಸರಿಸುವ ಮೂಲಕ ಸಮರ ಸಾರಬೇಕಿರುವ ಅನಿವಾರ್ಯತೆ ಎದುರಾಗಿದೆ.
ಇವೆಲ್ಲದಕ್ಕೂ ಸಾಕ್ಷಿಯೆಂಬಂತೆ, ಕಳೆದ ಒಂದೇ ವಾರದಲ್ಲಿ ಅವಳಿ ನಗರದ ಅಮಾಯಕರು 15 ಲಕ್ಷಕ್ಕಿಂತಲೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ವಾಟ್ಸಪ್ ಗ್ರೂಪ್ನಲ್ಲಿ ಬಂದ ಲಿಂಕ್ ಮೆಸೇಜ್ ಕ್ಲಿಕ್ ಮಾಡಿದ್ದಕ್ಕೆ ಗದುಗಿನ ವರ್ತಕ ಅನಿಲ್ ಚಿನ್ನಾಪುರ ಎಂಬುವವರು ತಮ್ಮ ಬ್ಯಾಂಕ್ ಖಾತೆಯಿಂದ 3.5 ಲಕ್ಷ ರೂ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, ರೋಣ ತಾಲೂಕಿನ ಮಲ್ಲಾಪುರ ಗ್ರಾಮದ ಅಶೋಕ ಕುಲಕರ್ಣಿ ಕೆವೈಸಿ ನೆಪದಲ್ಲಿ ಅಪರಿಚಿತರಿಗೆ ತಮ್ಮ ಬ್ಯಾಂಕ್ ಖಾತೆಯ ವಿವರ ನೀಡಿ 5 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಹರ್ತಿ ಗ್ರಾಮದ ಮಹೇಶ ಕಮ್ಮಾರರ ಮೊಬೈಲ್ ಹ್ಯಾಕ್ ಮಾಡಿ, ಸಿಮ್ ನಿಷ್ಕಿçಯಗೊಳಿಸಿದ ವಂಚಕರು, ಬರೊಬ್ಬರಿ 8 ಲಕ್ಷಕ್ಕೂ ಅಧಿಕ ಹಣವನ್ನ ದೋಚಿದ್ದಾರೆ.