ವಿಜಯಸಾಕ್ಷಿ ಸುದ್ದಿ, ಗದಗ: ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಇಲ್ಲದಿರುವುದು ಖಂಡನೀಯ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕಗಳಿಗೆ ಒಳಪಡುವ ಪ್ರತಿಯೊಂದು ಗ್ರಾಮಕ್ಕೆ ಸ್ಮಶಾನ ಭೂಮಿ ಇರುವ ಬಗ್ಗೆ ಈ ಹಿಂದೆ ಸುಪ್ರೀಮ್ ಕೋರ್ಟ್ ಮಾಹಿತಿಯನ್ನು ಕೇಳಿತ್ತು. ಆದರೆ ಅಧಿಕಾರಿಗಳು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿರುವುದಕ್ಕೆ ಮಂಗಳಾಪುರ ಗ್ರಾಮವೇ ಸಾಕ್ಷಿ ಎಂದು ಜಿಲ್ಲಾ ಡಿ.ಎಸ್.ಎಸ್ ಸಂಘಟನಾ ಸಂಚಾಲಕ ಸತೀಶ ಎಚ್.ಹೂಲಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮದಲ್ಲಿ ಕೆಲವೊಂದು ಜನರಿಗೆ ಸ್ವಂತ ಜಮೀನು ಇರುವುದರಿಂದ ಅವರ ಸಂಬಂಧಧಿಕರು ನಿಧನ ಹೊಂದಿದ ಸಮಯದಲ್ಲಿ ಸ್ವಂತ ಜಮೀನ ಭೂಮಿಯಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಆದರೆ ಮಂಗಳಾಪೂರ ಗ್ರಾಮದಲ್ಲಿ ಜಮೀನು ಇಲ್ಲದವರು ಶವ ಸಂಸ್ಕಾರವನ್ನು ಹಳ್ಳದ ದಂಡೆ ಮೇಲೆ ಮಾಡಬೇಕಿರುವುದು ಖಂಡನೀಯ ಮತ್ತು ಖೇದಕರ ಸಂಗತಿ. ಜಿಲ್ಲಾಡಳಿತ ಈ ಕೂಡಲೇ ಎಲ್ಲಾ ಗ್ರಾಮದಲ್ಲಿ ಸರ್ವೆ ಮಾಡಿ ಸ್ಮಶಾನ ಭೂಮಿಯನ್ನು ಮಂಜೂರು ಮಾಡಲು ಅವರು ಒತ್ತಾಯಿಸಿದ್ದಾರೆ.



