ಬೆಂಗಳೂರು:- ರಾಜಧಾನಿ ಬೆಂಗಳೂರಿನ ಚಿಕ್ಕಜಾಲದಲ್ಲಿ ಹಬ್ಬದ ದಿನ ಮನೆಯಲ್ಲಿ ನಾನ್ವೆಜ್ ತಿಂದಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಜರುಗಿದೆ.
ರಾಜೇಶ್ ಕೊಲೆಯಾದ ಯುವಕ. ಇವರು ಅಸ್ಸಾಂ ಮೂಲದವರು ಎಂದು ತಿಳಿದು ಬಂದಿದೆ. ಬಿಹಾರ ಮೂಲದ ಶಂಭೂ ಎಂಬಾತನಿಂದ ಕೃತ್ಯ ನಡೆದಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಕೂಡ ಗಾರೇ ಕೆಲಸ ಮಾಡಿಕೊಂಡಿದ್ದರು. ಬಿಹಾರದಲ್ಲಿ ದೀಪಾವಳಿ ಹಬ್ಬದ ಮುಗಿದ ತಕ್ಷಣ ಛತ್ ಪೂಜೆ ಹಬ್ಬ ಮಾಡುತ್ತಾರೆ. ಈ ವೇಳೆ ಯಾವುದೇ ನಾನ್ವೆಜ್ ತಿನ್ನುವಂತಿಲ್ಲ. ಅದರಂತೆ ಶಂಭೂ ಕೂಡ ಎರಡು ದಿನದಿಂದ ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಿದ್ದ.
ಸೋಮವಾರ ಹಬ್ಬದ ಪ್ರಮುಖ ದಿನವಾಗಿದೆ. ಆದರೆ ಶಂಭೂ ಪೂಜೆ ಮಾಡಿ ಹೊರಗೆ ಹೋಗಿದ್ದ ವೇಳೆ ಜೊತೆಗೆ ವಾಸವಿದ್ದ ರಾಜೇಶ್, ಹೊರಗಿನಿಂದ ನಾನ್ವೆಜ್ ತಂದು ಮನೆಯಲ್ಲೇ ತಿಂದಿದ್ದಾನೆ. ಈ ವಿಚಾರ ತಿಳಿದ ಶಂಭೂ ಜೊತೆಗೆ ವಾಸವಿದ್ದ ರಾಜೇಶ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದು, ಈ ಗಲಾಟೆಯಲ್ಲಿ ರಾಜೇಶ್ಗೆ ಗಂಭೀರ ಸ್ವರೂಪದ ಗಾಯವಾಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಪೊಲೀಸರು, ಆರೋಪಿ ಶಂಭೂವನ್ನು ಬಂಧಿಸಿದ್ದಾರೆ.


