ಹಾಸನ:- ತಾಲೂಕಿನ ದೋಣನಕಟ್ಟೆ ಗ್ರಾಮದಲ್ಲಿ ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜರುಗಿದೆ.
48 ವರ್ಷದ ಲಕ್ಕಪ್ಪ ಕೊಲೆಯಾದ ವ್ಯಕ್ತಿ. ಕೊಲೆಗೈದ ಆರೋಪಿಯನ್ನು ಬಸವರಾಜ ಎಂದು ಗುರುತಿಸಲಾಗಿದೆ. ಶಶಿ ಮತ್ತು ವಸಂತ ಚೌಕಾಬಾರ ಆಡುತ್ತಿದ್ದಾಗ ಬಸವರಾಜ ಬಂದು ಜಗಳ ಮಾಡಿ, ಅವರಿಬ್ಬರ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಲಕ್ಕಪ್ಪ ಜಗಳ ಬಿಡಿಸಲು ಹೋದಾಗ ಬಸವರಾಜ ಚಾಕುವಿನಿಂದ ಎದೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಬಸವರಾಜನ ಜೊತೆಗಿದ್ದ ನಂಜುಂಡಿಯು ಹಲ್ಲೆಗೆ ಬೆಂಬಲ ನೀಡಿದ್ದ ಎಂದ ಆರೋಪ ಕೇಳಿಬಂದಿದೆ. ಇದೀಗ ಆರೋಪಿ ಬಸವರಾಜ ಹಾಗೂ ನಂಜುಂಡಿ ತಲೆಮರೆಸಿಕೊಂಡಿದ್ದಾರೆ.
ಶಶಿ, ವಸಂತ ಎಂಬುವವರಿಗೆ ಬೆನ್ನು ಹಾಗೂ ಕೈ ಭಾಗಕ್ಕೆ ಬಸವರಾಜ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ. ಗಾಯಾಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



