ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಧಾರಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ರೋಣ ತಾಲೂಕಿನ ಬೆಣ್ಣೆಹಳ್ಳ ಸಂಪೂರ್ಣ ತುಂಬಿ ಹರಿಯುತ್ತಿದ್ದು, ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ವಿಷಯ ಆಲಿಸಿದ ತಕ್ಷಣ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರವೀಂದ್ರ ಪಾಟೀಲ ಯಾವಗಲ್ಲ, ಅಸೂಟಿ, ಕುರಡಗಿ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿ ರೈತರಿಗೆ ಧೈರ್ಯ ತುಂಬಿದರು.

Advertisement

ಬುಧವಾರ ಮಧ್ಯರಾತ್ರಿಯಿಂದ ಬೆಣ್ಣೆಹಳ್ಳ ಪ್ರವಾಹರೂಪಿಯಾಗಿ ಹರಿಯುತ್ತಿದ್ದು, ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಈಗಾಗಲೇ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಬಿತ್ತನೆಯಾಗಿದ್ದು, ಇನ್ನೇನು ಬೆಳೆ ಎತ್ತರಕ್ಕೆ ಬೆಳೆಯುತ್ತೆ ಎಂಬ ನಿರೀಕ್ಷೆ ಹೊಂದಿದ್ದ ರೈತ ಸಮುದಾಯ ಈಗ ಕೈಚೆಲ್ಲುವಂತೆ ಆಗಿದೆ. ಮೈದುಂಬಿ ಹರಿಯುತ್ತಿರುವ ಬೆಣ್ಣೆಹಳ್ಳದ ನೀರು ಬೆಳೆಗಳನ್ನು ಕೊಚ್ಚಿಹೊಗುವಂತೆ ಮಾಡಿದೆ. ಬೆಣ್ಣೆಹಳ್ಳ ಒಮ್ಮೆ ತುಂಬಿ ಹರಿಯತೊಡಗಿದರೆ ಶಾಂತವಾಗಲು ಎರಡು ದಿನಗಳಾದರೂ ಬೇಕು. ಆದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹಳ್ಳದ ರಭಸ ಕಡಿಮೆಯಾಗಲು ನಾಲ್ಕು ದಿನಗಳೇ ಬೇಕು ಎನ್ನುತ್ತಾರೆ ರೈತರು.

ಬೆಣ್ಣೆಹಳ್ಳದ ಪ್ರವಾಹದಿಂದ ರೋಣ, ನರಗುಂದ, ಹೊಳೆಆಲೂರ, ಮೆಣಸಗಿ, ಮೆಣಸಗಿ ಕೊಣ್ಣುರ ಸೇರಿದಂತೆ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳು ರಸ್ತೆ ಸಂಪರ್ಕವನ್ನು ಕಳೆದುಕೊಂಡಿವೆ. ಒಟ್ಟಿನಲ್ಲಿ ಪ್ರವಾಹ ರೂಪದಲ್ಲಿ ಹರಿಯುತ್ತಿರುವ ಬೆಣ್ಣೆಹಳ್ಳ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಬೆಣ್ಣೆಹಳ್ಳದ ನೀರು ಕೃಷಿ ಜಮೀನುಗಳಿಗೆ ನುಗ್ಗಿದ್ದು, ಪರಿಶೀಲನೆ ನಡೆಸಲಾಗಿದೆ. ರೈತರಿಗೂ ಸಹ ಧೈರ್ಯ ತುಂಬಲಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ನಾನು ಸಹ ಸ್ಥಳದಲ್ಲಿದ್ದೇನೆ

– ರವೀಂದ್ರ ಪಾಟೀಲ.

ಸಹಾಯಕ ಕೃಷಿ ನಿರ್ದೇðಶಕರು.

ಕೃಷಿ ಇಲಾಖೆ, ರೋಣ.

 

“ನನ್ನ ತಿಳುವಳಿಕೆಯಂತೆ ಈ ಪ್ರಮಾಣದಲ್ಲಿ ಬೆಣ್ಣೆಹಳ್ಳ ತುಂಬಿದ್ದಿಲ್ಲ. ಬೆಣ್ಣೆಹಳ್ಳ ಬಂದ ಸಂದರ್ಭದಲ್ಲಿ ಮಲಪ್ರಭಾ ನದಿ ನೀರನ್ನು ಬಿಟ್ಟಾಗ ಮಾತ್ರ ಪ್ರವಾಹ ರೀತಿಯಲ್ಲಿ ಹಳ್ಳ ಹರಿಯುತ್ತಿತ್ತು. ಜಮೀನುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಮತ್ತು ಬೆಳೆಗಳು ಸಹ ನೀರಲ್ಲಿ ಮುಳುಗಿವೆ”

– ಮುತ್ತಣ್ಣ ಕುರಿ.

ರೈತರು, ಯಾವಗಲ್ಲ.


Spread the love

LEAVE A REPLY

Please enter your comment!
Please enter your name here