Gadaga: ರೈತರಿಗೆ ಕೋಟಿ-ಕೋಟಿ ಪಂಗನಾಮ: ಜಿಲ್ಲಾಡಳಿತ ಭವನದ ಎದುರು ಅನ್ನದಾತರ ಅಹೋರಾತ್ರಿ ಧರಣಿ!

0
Spread the love

ಗದಗ:-ರೈತರಿಂದ ಕಡಲೆ ಖರೀದಿ ಮಾಡಿದ್ದ ವ್ಯಾಪಾರಿಯೋರ್ವ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದ ಪ್ರಕರಣ ಗದಗನಲ್ಲಿ ಜರುಗಿತ್ತು.

Advertisement

ಘಟನೆಯಿಂದ ಕಂಗಾಲಾದ ರೈತರು ಗದಗ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಆಗೋ ಹೀಗೋ ಸಾಲ ಸೋಲ‌‌ ಮಾಡಿ ಪಾಪ ರೈತರು ಕಡಲೆ ಬೆಳೆದಿದ್ದರು. ಮಾರುಕಟ್ಟೆ ದರಕ್ಕಿಂತ ಕೊಂಚ ಹೆಚ್ಚು ಬೆಲೆ ಸಿಗುತ್ತೆಂದು ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದರು. ಆದ್ರೆ ಕಡಲೆ ಖರೀದಿ ಮಾಡಿದ ವ್ಯಾಪಾರಿ ರೈತರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದ.

ಅನ್ನದಾತರ‌ ನಿರಂತರ ಹೋರಾಟದ ಫಲವಾಗಿ ಕೋಟ್ಯಾಂತರ ರೂಪಾಯಿ ಹಣ ವಾಪಾಸ್ ಕೊಟ್ಟಿದ್ದರೂ ಇನ್ನು ಕೊಡಬೇಕಾದ 6 ಕೋಟಿ ಹಣ ನೀಡದೇ ಖದೀಮ ಸತಾಯಿಸುತ್ತಿದ್ದಾನೆ.‌ ಹೀಗಾಗಿ ಜಿಲ್ಲೆಯ ಅನ್ನದಾತರು ಮತ್ತೊಮ್ಮೆ ಹೋರಾಟದ ಹಾದಿ ತುಳಿದಿದ್ದಾರೆ.

ಗದಗ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಗದಗ ಜಿಲ್ಲೆಯ ಕುರ್ತಕೋಟಿ, ಅಸುಂಡಿ, ಬಿಂಕದಕಟ್ಟಿ, ಅಂತೂರ ಬೆಂತೂರ ಸೇರಿ 11 ಗ್ರಾಮಗಳ ರೈತರು ಜಿಲ್ಲಾಡಳಿತ ಭವನದ ಮುಂದೆ ಧರಣಿ ಕೈಗೊಂಡಿದ್ದಾರೆ.

ಗದಗ ಜಿಲ್ಲೆಯ 10 ಕ್ಕೂ ಹೆಚ್ಚು ಗ್ರಾಮದ ರೈತರು ಕಡಲೆ ಬೆಳೆದು 11 ತಿಂಗಳ ಹಿಂದೆ ಮಾರಾಟ ಮಾಡಿದ್ದರು. ಆದರೆ ರೈತರಿಂದ ಕಡಲೆ ಖರೀದಿ ಮಾಡಿದ್ದ ದಾವಣಗೆರೆ ಮೂಲದ ಮಾರುತಿ ಗೌಡ ರೈತರಿಗೆ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದ.

ಹೀಗಾಗಿ ಕಳೆದ ಹನ್ನೊಂದು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಅಲ್ಲದೇ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಭರವಸೆ ನೀಡಿತ್ತು. ಜನವರಿ 5 ರೊಳಗೆ ಬಾಕಿ‌ ಹಣ ಕೊಡಿಸದಿದ್ರೆ ಜನವರಿ 6 ರಂದು ಗದಗ ಜಿಲ್ಲಾಡಳಿತ ಕಚೇರಿ ಮುಂದೆ ಹೋರಾಟ ಖಚಿತ ಅನ್ನೋ ಎಚ್ಚರಿಕೆಯನ್ನು ಈ ಹಿಂದೆ ರೈತರು ನೀಡಿದ್ದರು. ಅದರಂತೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ.

ಸಮಸ್ಯೆ ಬಗೆಹರಿಯದ ಕಾರಣ ನಿನ್ನೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಹೋರಾಟ ಆರಂಭವಾಗಿದ್ದು, ಜಿಲ್ಲಾಧಿಕಾರಿಗಳಿಗೆ ಘೇರಾವ್ ಹಾಕುವುದಾಗಿ ರೈತರು ಆಕ್ರೋಶ ಹೊರ ಹಾಕಿದ್ದಾರೆ.

ಡಿಸಿ ಅವರನ್ನ ಡಿಸಿ ಕಚೇರಿ ಬಿಟ್ಟು ಹೊರ ಬರದಂತೆ ಮಾಡೋಣ ಎಂದು ರೈತರು ಪಟ್ಟು ಹಿಡಿದಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಅಡುಗೆ ಮಾಡಿ ರೈತರು ರಾತ್ರಿ ಊಟ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here