ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನ ಮತ್ತು ವಿದ್ಯೆಯ ಮಹತ್ವ ಅರಿತು ವಿದ್ಯಾರ್ಜನೆ ಮಾಡಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಮೇಲೆ ಅದನ್ನು ಉಳಿಸಿಕೊಂಡು ಅದೇ ಸಾಧನೆಯಲ್ಲಿ ಮುಂದುವರೆಯಬೇಕು. ಸಮಯ ವ್ಯರ್ಥ ಮಾಡದೇ ಸತತ ಪರಿಶ್ರಮದಿಂದ ವಿದ್ಯೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಡಾ. ಎಪಿಜೆ ಅಬ್ದುಲ್ ಕಲಾಂ ಹಾಗೂ ಅಂಬೇಡ್ಕರ ಅವರ ಜೀವನಾದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಅವರಂತೆ ಬೆಳೆಯಬೇಕೆಂದು ವಿ.ಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಸಕ್ತ 2025ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಡಾ. ಎನ್.ವಾಯ್. ಮಟ್ಟಿಹಾಳ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಅಜ್ಞಾನದ ಕತ್ತಲೆಯನ್ನು ಗೋಗಲಾಡಿಸುವ ಜ್ಞಾನದ ಜ್ಯೋತಿಯಾಗಿ ಬೆಳೆಯಬೇಕು. ತೀವ್ರಗತಿಯಲ್ಲಿ ಬದಲಾಗುತ್ತಿರುವ ಇಂದಿನ ಅಧುನಿಕ ಯುಗದಲ್ಲಿ ನಮ್ಮ ಪ್ರತಿಭೆಗೆ ಸಂಸ್ಕಾರದ ಸ್ಪರ್ಶ ಬೇಕಾಗಿದೆ. ಸಾಧನೆಗೆ ಸಿರಿವಂತಿಕೆಯ, ಅಂತಸ್ಥಿನ ಆಯಾಮಗಳು ಕಾರಣವಾಗುವುದಿಲ್ಲ. ಪ್ರತಿಯೊಬ್ಬರೂ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಕೀಳರಿಮೆ ಬಿಟ್ಟು ನಕಾರಾತ್ಮಕ ವಿಚಾರಗಳಿಂದ ಅಂತರಂಗದ ಜೈಲಿನಲ್ಲಿ ಬಂಧಿಸಿಕೊಳ್ಳದೆ ಬುದ್ಧ, ಬಸವ ಹಾಗೂ ಅಂಬೇಡ್ಕರ ಅವರನ್ನು ಮಾದರಿಯಾಗಿಟ್ಟುಕೊಂಡು ಸತತ ಪರಿಶ್ರಮ ಮತ್ತು ಆತ್ಮಬಲದಿಂದ ದಿಟ್ಟ ಹೆಜ್ಜೆಯನ್ನಿಟ್ಟರೆ ಜೀವನದಲ್ಲಿ ಬಹುದೊಡ್ಡ ಸಾಧನೆ ಮಾಡಲು ಸಾಧ್ಯವೆಂದರು.
ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾದ ಮೇಘರಾಜ ವಾಲ್ಮಿಕಿ ಮತ್ತು ಆದರ್ಶ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾಮಟ್ಟದ ಫೆಸ್ಟ್ ನಲ್ಲಿ ಪ್ರಶಸ್ತಿ ಪಡೆದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿಪತ್ರ ನೀಡಿದರು.
ವೇದಿಕೆಯ ಮೇಲೆ ಅಮರೇಶ ಅಂಗಡಿ, ಈಶಣ್ಣ ಮುನವಳ್ಳಿ, ಮೋಹನ್ ಅಲ್ಮೇಲಕರ್, ಬಲರಾಮ ಬಸವಾ, ಶೇಖಣ್ಣ ಕಳಸಾಪೂರಶೆಟ್ಟರ, ವಿದ್ಯಾಧರ ದೊಡ್ಡಮನಿ, ಎಸ್.ಎಸ್. ಚಟ್ಟಿ, ಸಿದ್ಧಲಿಂಗಯ್ಯ ಹಿರೇಮಠ, ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು. ರೂಪಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾ. ಎಂ.ಎಂ. ಬುರಡಿ ಸ್ವಾಗತಿಸಿದರು. ಕೆ.ವ್ಹಿ. ಬಾಗಲಕೋಟಿ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಭಂಡಾರಿ ವಂದಿಸಿದರು. ಪ್ರೀತಿ ಹಿರೇಮಠ ಹಾಗೂ ಮೇಘರಾಜ ವಾಲ್ಮಿಕಿ ಮನರಂಜನಾ ಕಾರ್ಯಕ್ರಮ ನಿರ್ವಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಜಗತ್ತಿನಲ್ಲಿ ವಿದ್ಯೆಗೆ ಸಮಾನವಾದುದು ಯಾವುದೂ ಇಲ್ಲ. ಇಂದು ನಕರಾತ್ಮಕವಾಗಿ ಬೆಳೆಯುತ್ತಿರುವ ಯುವಜನಾಂಗವು ತಮ್ಮ ಪ್ರವೃತ್ತಿಗಳನ್ನು ಬದಲಾಯಿಸಿಕೊಂಡು ವಿಚಾರವಾದಿಗಳ, ಶರಣರ ಮತ್ತು ಜ್ಞಾನಿಗಳ ವಿಚಾರಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನ ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.