ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಾವಿತ್ರಿಬಾಯಿ ಫುಲೆ ಈ ದೇಶ ಕಂಡ ಮೊತ್ತ ಮೊದಲ ಮಹಿಳಾ ಶಿಕ್ಷಕಿಯಾಗಿದ್ದಾರೆ. ಅನೇಕ ಕಷ್ಟನಷ್ಟಗಳನ್ನು ಅನುಭವಸಿ ಅವರು ಶಾಲೆ ಕಲಿತರು, ನಂತರ ಶಿಕ್ಷಕಿಯಾಗಿ ಈ ದೇಶಕ್ಕೆ ಸೇವೆಯನ್ನೂ ಸಲ್ಲಿಸಿದರು. ಆದರೆ ಅವರು ಸೇವೆ ಸಲ್ಲಿಸುವಾಗ ಅನೇಕ ತೊಂದರೆಗಳನ್ನು ಅನುಭವಿಸಿದರು ಎಂದು ಮುಖ್ಯ ಶಿಕ್ಷಕ ಬಿ.ಬಿ. ಕುರಿ ಹೇಳಿದರು.
ಪಟ್ಟಣದ ಕೆಜಿಎಮ್ಎಸ್ ಶಾಲೆಯಲ್ಲಿ ಶುಕ್ರವಾರ ಆಚರಿಸಲಾದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂದಿನ ದಿನಗಳಲ್ಲಿ ಮಹಿಳೆಯರು ಶಾಲೆಯನ್ನು ಕಲಿಯುವಂತಿರಲಿಲ್ಲ ಮತ್ತು ಕಲಿಸುವಂತೆಯೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ತಮ್ಮ ಪತಿಯ ಬೆಂಬಲ-ಮಾರ್ಗದರ್ಶನದೊಂದಿಗೆ ಶಾಲೆಯನ್ನು ಕಲಿತು, ಕಲಿಸತೊಡಗಿದರು. ಮಹಿಳೆಯರು ಶಿಕ್ಷಣ ಪಡೆದರೆ ಮಾತ್ರ ಈ ದೇಶದ ಉದ್ಧಾರ ಸಾಧ್ಯ ಎಂಬುದನ್ನು ಅವರು ಬಲವಾಗಿ ನಂಬಿದ್ದರು. ಅವರ ಜೀವನ ಚರಿತ್ರೆಯನ್ನು ಓದುವ ಮೂಲಕ ನೀವೂ ಸಹ ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಭೆಯನ್ನುದ್ದೇಶಿಸಿ ಶಿಕ್ಷಕ ಜೆ.ಎ. ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಎನ್.ಎಲ್. ಚವ್ಹಾಣ, ಎಂ.ಪಿ. ಅಣಗೌಡರ, ಎಸ್.ಐ. ಜಗಾಪುರ, ರಾಜೇಶ್ವರಿ ಗವಳಿ, ಶಿಕ್ಷಕ ಡಿ.ವಿ. ಕಳ್ಳಿ ಇದ್ದರು.