ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಆಶ್ರಯದಲ್ಲಿ ಭಾರತೀಯ ವಿದ್ಯಾಭವನದಿಂದ ನಡೆಯುತ್ತಿರುವ ಪುಲಿಗೆರೆ ಉತ್ಸವದ ಮೊದಲ ದಿನ ಸಂಜೆ ಕಾರ್ಯಕ್ರಮದಲ್ಲಿ ಸಿದ್ದಾಪುರದ ಕೊಳಗಿ ಕೇಶವ ಹೆಗಡೆ ತಂಡದವರು ಸಾದರಪಡಿಸಿದ ಯಕ್ಷಗಾನ ನೃತ್ಯ ವೈಭವ ನೋಡುಗರ ಮೈನವಿರೇಳಿಸಿತು.
ಕಲಾವಿದರು ಕೃಷ್ಣಾರ್ಜುನರ ಕಾಳಗದ ಪ್ರಸಂಗ ಆಯ್ದುಕೊಂಡು ಪ್ರಸ್ತುತಪಡಿಸಿದ ಯಕ್ಷಗಾನ ಅತ್ಯಂತ ಮನಮೋಹಕವಾಗಿತ್ತು. ಗಯಗಂಧರ್ವನು ಯಜ್ಞವನ್ನು ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಕುಪಿತನಾದ ಶ್ರೀಕೃಷ್ಣ ಅವನನ್ನು ಎಂಟು ದಿನಗಳಲ್ಲಿ ಸಂಹರಿಸುವುದಾಗಿ ಶಪಥ ಮಾಡುತ್ತಾನೆ. ಇದನ್ನರಿತ ಗಯಗಂಧರ್ವ ಭಯಪಟ್ಟು ನನ್ನನ್ನು ಕಾಪಾಡು ಎಂದು ಅರ್ಜುನನಲ್ಲಿ ಮೊರೆ ಇಡುತ್ತಾನೆ. ಇದು ಕೃಷ್ಣಾರ್ಜುನರ ಕಾಳಗಕ್ಕೆ ಕಾರಣವಾಗಿರುತ್ತದೆ. ಈರ್ವರು ಕಲಾವಿದರು ಸನ್ನಿವೇಶ, ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿ ಎಲ್ಲರ ಮನ ಸೆಳೆದರು.
ಬಳಿಕ ಶಿಗ್ಗಾವಿಯ ಬಸವೇಶ್ವರ ನೃತ್ಯ ಶಾಲೆಯ ಶರಣ ಶೇಖಪ್ಪ ಬಡ್ಡಿ ಮತ್ತು ತಂಡದವರು ಪ್ರದರ್ಶಿಸಿದ ಭರತನಾಟ್ಯ ಪ್ರದರ್ಶನ ನಾಟ್ಯ ಲೋಕವನ್ನೇ ಸೃಷ್ಟಿಸಿತ್ತು. ಯುವ ಕಲಾವಿದ ಶರಣ ಈವರೆಗೆ 500 ವೇದಿಕೆಗಳಲ್ಲಿ ತಮ್ಮ ಭರತನಾಟ್ಯ ಪ್ರದರ್ಶಿಸಿ ಕಲಾರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಆರಂಭದಲ್ಲಿ ಸಾದರಪಡಿಸಿದ ಸ್ವಾಗತ ನೃತ್ಯ, ಸುಂದರವಾಗಿ ಮೂಡಿ ಬಂದಿತು. ನಂತರ ಗಣಪನ ಪೂಜಾ ನೃತ್ಯ ವೈಭವ ಮತ್ತು ಸಭಿಕರಿಗೆ ಹೂಗಳ ಸಮರ್ಪಣೆ ನೃತ್ಯವಂತೂ ಅದ್ಭುತವಾಗಿ ಮೂಡಿ ಬಂದಿತು.
ನಂತರ ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಡಾ. ಅರ್ಜುನ ವಠಾರ ಅವರು ಹಿಂದೂಸ್ತಾನಿ ಸಂಗೀತ ಪ್ರಸ್ತುತಪಡಿಸಿದರು. ಅವರು ಬಳಿಕ ದಾಸರ ಪದಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮನಸೂರೆಗೊಂಡರು.



