ಗದಗ:– ಮಧ್ಯಪ್ರಾಚ್ಯ ದೇಶಗಳ ಯುದ್ಧದ ಭೀತಿಯಿಂದಾಗಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸಿಲಿಂಡರ್ ಅಭಾವ ತಲೆದೋರಿದೆ.
ಅದರಂತೆ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲೂ ಸಿಲಿಂಡರ್ ಗಾಗಿ ಹಾಹಾಕಾರ ಉಂಟಾಗಿದ್ದು, ಗ್ಯಾಸ್ ಖರೀದಿಗಾಗಿ ಜನ ಸಾಲುಗಟ್ಟಿ ನಿಂತಿರುವ ದೃಶ್ಯ ನರಗುಂದ ಪಟ್ಟಣದಲ್ಲಿ ಕಂಡುಬಂದಿದೆ.
ಸಿದ್ದನಬಾವಿ ಓಣಿಯಲ್ಲಿರೋ ಇಂಡಿಯನ್ ಗ್ಯಾಸ್ ಬಳಿ ಊಟ, ನಿದ್ದೆ ಬಿಟ್ಟು ನಸುಕಿನಿಂದಲೇ ಖಾಲಿ ಸಿಲಿಂಡರ್ ಸಮೇತ ಬಿಸಿಲು ಎನ್ನದೇ ಕ್ಯೂ ನಿಂತಿದ್ದು, ಜನರ ಗೋಳಾಟ ಹೇಳತ್ತೀರದ್ದಾಗಿದೆ. ಗ್ರಾಮೀಣ ಭಾಗದ ಜನತೆ ಕೂಡ ಕಂಗಾಲಾಗಿದ್ದಾರೆ. ಸಿಲಿಂಡರ್ ಸಿಗದೇ ಬಂಡಾಯದ ನಾಡಿನ ಜನರ ಗೋಳು ಕೇಳುವವರೇ ಯಾರು ಇಲ್ಲದಂತಾಗಿದೆ.
ಬೆಳಗ್ಗೆ 8 ರಿಂದ 11 ಗಂಟೆವರೆಗೆ ಮಾತ್ರ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ನರಗುಂದ ತಾಲೂಕಿನಲ್ಲಿ ಗೃಹಬಳಕೆ ಸಿಲಿಂಡರ್ ಸಮಸ್ಯೆ ತಲೆದೋರಿದೆ.
ಒಂದೆಡೆ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಗೃಹಬಳಕೆ ಸಿಲಿಂಡರ್ ಸಮಸ್ಯೆ ಇಲ್ಲ ಅಂತ ಪ್ರಕಟಣೆ ಹೊರಡಿಸಿದೆ. ಇನ್ನೊಂದೆಡೆ ನರಗುಂದ ಪಟ್ಟಣದಲ್ಲಿ ನಾಲ್ಕೈದು ದಿನಗಳಿಂದ ತೀವ್ರ ಸಮಸ್ಯೆ ಉಂಟಾಗಿದ್ದು, ಅಧಿಕಾರಿಗಳ ಮೌನದ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಸಮಸ್ಯೆ ಆಗ್ತಾಯಿದ್ರು ಜಿಲ್ಲಾಡಳಿತ, ತಾಲೂಕಾಡಳಿತ ಮೌನವಹಿಸಿದ್ದು ಜನತೆ ಆಕ್ರೋಶ ಹೊರ ಹಾಕಿದ್ದಾರೆ.



