ವಿಜಯಸಾಕ್ಷಿ ಸುದ್ದಿ, ಗದಗ : ಹಿಂದುಳಿದ ಜನಾಂಗಗಳ ಸರ್ವತೋಮುಖ ಅಭಿವೃದಿಗೆ ಅವಿರತ ಶ್ರಮಿಸುವ ಮೂಲಕ ಹಿಂದುಳಿದ ವರ್ಗಗಳ ಹರಿಕಾರರೆನಿಸಿಕೊಂಡಿರುವ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾಗಿರುವ ದಿ. ಡಿ. ದೇವರಾಜು ಅರಸು ಅವರ ಹೆಸರನ್ನು ಎಲೆಕ್ಟ್ರಾನಿಕ್ ಸಿಟಿಗೆ ನಾಮಕರಣ ಮಾಡುವ ಮೂಲಕ ಹಿಂದುಳಿದ ಜನಾಂಗದವರ ಭಾವನೆಗಳನ್ನು ಗೌರವಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ನಿರ್ಧಾರವನ್ನು ಹುಲಕೋಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಸೀಮಸಾಬ ತಹಸೀಲ್ದಾರ ಅಭಿನಂದಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಕಂಡ ಅಪರೂಪದ ರಾಜಕಾರಣಿ ದಿ. ಡಿ.ದೇವರಾಜ ಅರಸು. ಪ್ರತಿಯೊಬ್ಬ ರೈತನು ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕು ಸಾಗಿಸಬೇಕೆಂಬ ಒಂದೇ ಒಂದು ಉದ್ದೇಶದಿಂದಾಗಿ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ತರುವ ಮೂಲಕ ರೈತರ ಪಾಲಿಗೆ ದೇವ ಮಾನವರಾದರು. ಅವರ ಹೆಸರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿ ಎಂಬ ಉದ್ದೇಶದಿಂದಾಗಿ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ನಗರಕ್ಕೆ ಡಿ. ದೇವರಾಜ ಅರಸು ಅವರ ಹೆಸರು ನಾಮಕರಣ ಮಾಡುವ ಮೂಲಕ ಅವರ ಸಾರ್ವಜನಿಕ ಬದುಕಿನ ವ್ಯಕ್ತಿತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿರಸ್ಥಾಯಿಯಾಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.