ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯನ್ನಾಗಿಸಿ, ಅವರಿಂದಲೇ ತ್ರಿಕೋಟಿ ಶಿವಲಿಂಗ ಸ್ಥಾಪನೆ ಮಾಡಿಸುತ್ತೇವೆ ಎಂದು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮುಕ್ತಿಮಂದಿರದಲ್ಲಿ ನಡೆದ ಲಿಂ.ವೀರ ಗಂಗಾಧರ ಜಗದ್ಗುರುಗಳ 42ನೇ ಪುಣ್ಯಾರಾಧನಾ ಮಹೋತ್ಸವದಲ್ಲಿನ ಹೇಳಿಕೆಯನ್ನು ಸೋಮವಾರ ನೊಣವಿನಕೆರೆ ಕಾಡಸಿದ್ದೇಶ್ವರಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯರ ಮಹಾಸ್ವಾಮಿಗಳು ಮುಕ್ತಿಮಂದಿರದಲ್ಲಿಯೇ ಪುನರುಚ್ಛರಿಸಿದರು.
ಅಂದು ಅವರು ನೀಡಿದ್ದ ಹೇಳಿಕೆಯನ್ನು ಸೋಮವಾರ ಮತ್ತೊಮ್ಮೆ ಸ್ಪಷ್ಟಪಡಿಸಿದ ಶ್ರೀಗಳು, ಡಿಸಿಎಂ ಡಿ.ಕೆ.ಶಿ ಅವರನ್ನು ಮುಖ್ಯಮಂತ್ರಿಯನ್ನಾಗಿಸುವದು ಶತಸಿದ್ಧ, ಇಂದೂ ಸಹ ಅದೇ ಮಾತನ್ನು ಹೇಳುತ್ತಿದ್ದೇವೆ. ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನಾ ಕಾರ್ಯ ಇದೀಗ ಪ್ರಾರಂಭವಾಗಿದ್ದು, ಪ್ರಥಮ ಹಂತವನ್ನು ಪೂರೈಸಿ ಪ್ರಥಮ ಶಿವಲಿಂಗ ಸ್ಥಾಪನೆಗೆ ಡಿ.ಕೆ. ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡಿ, ಅವರಿಂದಲೇ ಶಿವಲಿಂಗ ಸ್ಥಾಪನೆಗೆ ಮಾಡಿಸುವ ಮೂಲಕ ನೊಣವಿನಕೆರೆ ಶ್ರೀಗಳು ಏನೆನ್ನುವದನ್ನು ನಾಡಿಗೆ ತೋರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಚರ್ಚೆಗೆ ಮತ್ತೆ ನಾಂದಿ ಹಾಡಿದ್ದಾರೆ.
ಲಿಂ. ವೀರ ಗಂಗಾಧರ ಜಗದ್ಗುರುಗಳ ಮೇಲೆ ಅಪಾರವಾದ ಭಕ್ತಿ, ನಂಬಿಕೆ ಹೊಂದಿರುವ ಡಿ.ಕೆ. ಶಿವಕುಮಾರ ನೆನೆಗುದಿಗೆ ಬಿದ್ದಿರುವ ತ್ರಿಕೋಟಿಲಿಂಗ ಸ್ಥಾಪನೆಗೆ ಬೇಕಾಗುವ ಕೋಟ್ಯಾಂತರ ರೂ ಅನುದಾನ ಕಲ್ಪಿಸಿದ್ದಾರೆ. ಆದಷ್ಟು ಬೇಗ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಭವಿಷ್ಯವಾಣಿಯನ್ನು ಶ್ರೀಗಳು ನುಡಿದಿದ್ದಾರೆ.