ಬೆಂಗಳೂರು: ಡಿಕೆ ಸುರೇಶ್ ತಂಗಿ ಹೆಸರಿನಲ್ಲಿ ಚಿನ್ನದಂಗಡಿ ಮಾಲೀಕನಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಐಶ್ವರ್ಯ ಗೌಡ @ ನವ್ಯಶ್ರೀ ಹಾಗೂ ಹರೀಶ್ ಕೆ ಎಂಬ ದಂಪತಿಯಿಂದ ವಂಚನೆ ಆರೋಪ ಕೇಳಿಬಂದಿದ್ದು, ಜೊತೆಯಲ್ಲಿ ನಟ ಧರ್ಮೇಂದ್ರ ಮೂಲಕ ಕರೆ ಮಾಡಿಸಿ ಡಿ ಕೆ ಸುರೇಶ್ ರಂತೆ ಮಾತಾಡಿಸಿರುವ ಆರೋಪ ಕೂಡ ಕೇಳಿಬಂದಿದೆ.
ತಾನು ಮಾಜಿ ಸಂಸದರ ಸಹೋದರಿ, ಅನೇಕ ರಾಜಕೀಯ ನಾಯಕರ ಪರಿಚಯವಿದೆ ಎಂದು ವನಿತಾ ಅವರಿಗೆ ಐಶ್ವರ್ಯಾ ಗೌಡ, ಹಾಗೂ ಆಕೆಯ ಪತಿ ಹರೀಶ್ ನಂಬಿಸಿದ್ದಾರೆ. ನಂತರ ಸಾಲದ ರೂಪದಲ್ಲಿ ಚಿನ್ನ ಪಡೆದು ಆರಂಭದಲ್ಲಿ ಕೆಲ ಬಾರಿ ಹಣ ನೀಡಿದ್ದಾರೆ. ಆದರೆ 2023 ಅಕ್ಟೋಬರ್ನಿಂದ 2024 ಏಪ್ರಿಲ್ವರೆಗೆ ಹಂತ ಹಂತವಾಗಿ ಪಡೆದಿದ್ದ ಒಟ್ಟು 14 ಕೆ.ಜಿ 660 ಗ್ರಾಂ ಚಿನ್ನಕ್ಕೆ ಪ್ರತಿಯಾಗಿ ಹಣ ನೀಡಿಲ್ಲ. ಹಣ ಕೇಳಿದಾಗ ಸದ್ಯಕ್ಕೆ ಹಣವಿಲ್ಲ ಎಂದಿದ್ದ ಆರೋಪಿಗಳು 2024ರ ಜುಲೈವರೆಗೂ ಸಮಯಾವಕಾಶ ಕೇಳಿದ್ದಾರೆ. ಹಾಗೂ ಪಡೆದಿದ್ದ ಚಿನ್ನಕ್ಕೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ.
ಕಾಲಾವಕಾಶ ಮುಗಿದ ಬಳಿಕ ಹಣ ವಾಪಾಸ್ ಕೇಳಿದಾಗ, ಧರ್ಮೇಂದ್ರ ಮೂಲಕ ಕರೆ ಮಾಡಿಸಿ ಸಂಸದರ ಧ್ವನಿಯಲ್ಲಿ ಮಾತನಾಡಿಸಿದ್ದಾರೆ. ಈ ವಿಷಯ ತಿಳಿದ ಬಳಿಕ ಐಶ್ವರ್ಯಾಗೆ ಕರೆ ಮಾಡಿ ಪಡೆದಿದ್ದ ಚಿನ್ನಕ್ಕೆ ಪ್ರತಿಯಾಗಿ ಹಣ ನೀಡುವಂತೆ ಕೇಳಿದಾಗ, ಹಣ ಕೇಳಿದರೆ ಧರ್ಮೇಂದ್ರನನ್ನು ಕಳುಹಿಸಿ ಕೊಲೆ ಮಾಡಿಸುವುದಾಗಿ ಬೆದರಿಸಿದ್ದಾರೆ. ಅಲ್ಲದೇ ಧರ್ಮೇಂದ್ರ ಅವರನ್ನು ಅಂಗಡಿಗೆ ಕಳುಹಿಸಿ ಬೆದರಿಸಿದ್ದಾರೆ ಎಂದು ವನಿತಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಐಶ್ವರ್ಯ ಗೌಡ, ನಟ ಧರ್ಮೇಂದ್ರ ಹಾಗೂ ಹರೀಶ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.