ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಕ ವೃತ್ತಿಯಲ್ಲಿ ಕಲಿಯುತ್ತ ಕಲಿಸಬೇಕು. ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮೇಲಾಧಿಕಾರಿಗಳು ವಿಷಯಗಳನ್ನು ಅರಿತುಕೊಂಡು ವೃತ್ತಿ ನಿರತರಿಗೆ ತರಬೇತಿ ನೀಡಬೇಕೆಂದು ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಅವರು ಗದಗ ಯು.ಆರ್.ಸಿ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಮುನ್ನೋಟ-2024-25ರ ಕಾರ್ಯಕ್ರಮದಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂಪನ್ಮೂಲ ವ್ಯಕ್ತಿಗಳಿಗಾಗಿ ವಿವಿಧ ಶೈಕ್ಷಣಿಕ ಯೋಜನೆಗಳ ಕುರಿತಾದ ಪ್ರತಿದಿನದ ಉಪನ್ಯಾಸ ಮಾಲಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ವರ್ಗ ಕೋಣೆಯ ಬೋಧನಾ-ಕಲಿಕೆಯ ಪ್ರಕ್ರಿಯೆಯ ಚಟುವಟಿಕೆಯಾಧಾರಿತವಾಗಿ ಮಗು ಕೇಂದ್ರಿತ ಪರಿಣಾಮಕಾರಿ ಕಲಿಕೆಗೆ ಸರಿಯಾದ ಬೆಂಬಲ ವ್ಯವಸ್ಥೆ ಎಂದರೆ ಸಂಪನ್ಮೂಲ ವ್ಯಕ್ತಿಗಳು. ಅವರ ಕೆಲಸ-ಕಾರ್ಯಕ್ಕೆ ಅನುಕೂಲವಾಗಲೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಡಿ.ವೈ.ಪಿ.ಸಿ ಎಂ.ಎಚ್. ಕಂಬಳಿ, ಡಯಟ್ ಉಪನ್ಯಾಸಕರಾದ ಶಂಕರ ಹಡಗಲಿ, ಶಿವಕುಮಾರ ಕುರಿ ಪಾಲ್ಗೊಂಡು ಶಾಲಾಭಿವೃದ್ಧಿ ಯೋಜನೆಯ ಮಹತ್ವದ ಕುರಿತು ಅಗತ್ಯ ಸೂಚನೆ ನೀಡಿ, ಶಾಲಾ ಹಂತದ ಯೋಜನೆ ಆಧರಿಸಿ ತಾಲೂಕು ಹಂತದ ಯೋಜನೆ ರೂಪಿಸಬೇಕೆಂದರು.
ಕಾರ್ಯಕ್ರಮದಲ್ಲಿ ಜಿ.ಎಂ. ಜಗದೀಶ, ಸಮನ್ವಯಾಧಿಕಾರಿ ಹೆಚ್.ಎ. ಫಾರೂಖಿ, ಪ್ರಕಾಶ ಮಂಗಳೂರ, ಶ್ಯಾಮ ಲಾಂಡೆ ಸೇರಿದಂತೆ ಬಿಆರ್ಪಿ, ಸಿಆರ್ಪಿ, ಬಿಐಇಆರ್ಟಿಗಳು ಪಾಲ್ಗೊಂಡಿದ್ದರು.