
ವಿಜಯಸಾಕ್ಷಿ ಸುದ್ದಿ, ಗದಗ: ಹಾಲನ್ನು ಜಾಗತಿಕ ಆಹಾರವನ್ನಾಗಿ ವಿಶ್ವಕ್ಕೆ ಪರಿಚಯಿಸುವುದು ಮತ್ತು ಹೈನೋದ್ಯಮದ ಕಾರ್ಯಚಟುವಟಿಕೆ ಸಾಧನಗಳನ್ನು ಪ್ರಚುರಪಡಿಸುವುದರರೊಂದಿಗೆ ಪ್ರೋತ್ಸಾಹಿಸುವುದಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆಯ ಇಂತಹ ಪ್ರೇರಣಾದಾಯಕ ಉಪಕ್ರಮಗಳಿಂದಾಗಿ ಇಂದು ವಿಶ್ವದಾದ್ಯಂತ 100 ಕೋಟಿಗೂ ಅಧಿಕ ರೈತ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಗುಣಮಟ್ಟದ ಹಾಲು ಉತ್ಪಾದನೆಯೊಂದಿಗೆ ಅವರ ಜೀವನ ಸುಧಾರಣೆಗೂ ಸಹಕಾರಿಯಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಎಚ್.ಪಾಟೀಲ ಹೇಳಿದರು.
ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಧಾರವಾಡ ಹಾಲು ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸಹಕಾರಿ ಪ್ರಕಾಶ ಬಿ.ಮಹಾಜನಶೆಟ್ಟರ ಮಾತನಾಡಿ, ಕೃಷಿ ಆಧಾರಿತ ಭಾರತದ ಜನರ ಜೀವನದ ಉಪಕಸಬುಗಳಲ್ಲೊಂದಾದ ಹೈನುಗಾರಿಕೆ ಶ್ರೀಮಂತದಾಯಕ ಕಾಯಕವಾಗಿದೆ. ಭಾರತವಿಂದು ವಿಶ್ವದಲ್ಲಿಯೇ ಅತೀ ಹೆಚ್ಚು ಹಾಲು ಉತ್ಪಾದಿಸುತ್ತಿರುವ ಅಗ್ರಮಾನ್ಯ ರಾಷ್ಟ್ರವಾಗಿದ್ದು, ಸುಮಾರು 230.58 ಮಿಲಿಯನ್ ಮೆಟ್ರಿಕ್ ಟನ್ ಹಾಲು ಉತ್ಪಾದನೆ ಮಾಡಿ ಶೇ.4ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಕರ್ನಾಟಕ ರಾಜ್ಯದ ಜನರ ಸ್ವಾವಲಂಬಿ ಮತ್ತು ಸಮಗ್ರ ಸಹಕಾರಿ ಹಾಲು ಉತ್ಪಾದನೆ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಹಾಲು ಉತ್ಪಾದಕ ಸದಸ್ಯರ ಜೀವನದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಏಳಿಗೆಗೆ ಶ್ರಮಿಸುವ ಕೆ.ಎಂ.ಎಫ್ ಕೋಟ್ಯಾಂತರ ಜನರ ಜೀವನಾಸರೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂನಿಯನ್ನ ಉಪಾಧ್ಯಕ್ಷ ವಾಯ್.ಎಫ್. ಪಾಟೀಲ ವಹಿಸಿ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಅಬಲರಾದವರು, ಅವಕಾಶವಂಚಿತ ಜನರಿದ್ದು, ಇಂತಹ ಜನರ ಆರ್ಥಿಕ, ಸಾಮಾಜಿಕ ಸ್ಥಿತಿ-ಗತಿಯನ್ನು ಉತ್ತಮಗೊಳಿಸಲು ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ಮಾತ್ರ ಸಾಧ್ಯ. ಗ್ರಾಮೀಣ ಪ್ರದೇಶದ ಮಹಿಳೆಯರು ಸಂಘಟಿತರಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ತಮ್ಮ ಆರ್ಥಿಕ ಅಭಿವೃಧ್ಧಿಯನ್ನು ಹೊಂದಲು ಪ್ರಯತ್ನಿಸಬೇಕೆಂದು ಹೇಳಿದರು.
ಯೂನಿಯನ್ನ ನಿರ್ದೇಶಕ ಶಿದ್ದನಗೌಡ ಬಿ.ಪಾಟೀಲ, ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಕೆ.ಸಿ. ಕೂಸನೂರಮಠ, ಮಾರಾಟಾಧಿಕಾರಿ ಬಿ.ಆರ್. ನಿಡಗುಂದಿ, ಧಾರವಾಡ ಹಾಲು ಒಕ್ಕೂಟದ ಧಾರವಾಡ ವ್ಯವಸ್ಥಾಪಕ ಡಾ. ರಾಕೇಶ ತಲ್ಲೂರ, ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಪ್ರಸನ್ನ ಪಟ್ಟೇದ, ಹಾಲು ಒಕ್ಕೂಟದ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ವಿಸ್ತರಣಾಧಿಕಾರಿಗಳಾದ ಸಿ.ಎಸ್. ಕಲ್ಲನಗೌಡರ, ಬಸವರಾಜ ಎಸ್.ಜುಮ್ಮಣ್ಣವರ, ಉಮೇಶ ಹುಂಡೇಕಾರ ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ ಡಾ. ವೀರೇಶ ತರಲಿ, ಡಾ. ಎಂ.ಬಿ. ಮಡಿವಾಳರ, ಬಿ.ಪಿ. ಹಿರೇಮಠ ಉಪನ್ಯಾಸ ನೀಡಿದರು. ಯಳವತ್ತಿ ಹಾಗೂ ಕಡಕೋಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಾದ ಗಂಗಾ ಫ.ಮಲ್ಲರಡ್ಡಿ ಹಾಗೂ ಭಾಗೀರಥಿ ಯ.ಭಂಡಾರಿ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ವಿಸ್ತರಣಾಧಿಕಾರಿ ಸಿ.ಎಸ್. ಕಲ್ಲನಗೌಡರ ವಂದಿಸಿದರು.
ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಮಾತನಾಡುತ್ತಾ, 1983ರಲ್ಲಿ ನಂದಿನಿ ಹೆಸರನ್ನು ತನ್ನ ಉತ್ಪನ್ನಗಳ ಬ್ರ್ಯಾಂಡ್ ಆಗಿ ಕೆ.ಎಂ.ಎಫ್ ಘೋಷಿಸಿತು. ನಂದಿನಿ ಎಂಬುದು ಹಿಂದೂ ದೇವತೆಯ ಹೆಸರು. ಹಾಗೆಯೇ ಗೋವಿನ ಹೆಸರುಗಳಲ್ಲಿ ಒಂದು. ಹೀಗಾಗಿ, ನಂದಿನಿ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.