ಕೊಪ್ಪಳದ ಮರಕುಂಬಿ ಗ್ರಾಮದಲ್ಲಿ 2014ರಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 101 ಜನರನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮೂವರಿಗೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಇನ್ನೂ ಕೋರ್ಟ್ನಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡು ಅಪರಾಧಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ. ರಾಮಪ್ಪ ಲಕ್ಷ್ಮಣ ಭೋವಿ (44) ಸಾವಿಗೀಡಾದ ಅಪರಾಧಿ. ಗಲಾಟೆ ಪ್ರಕರಣ ಸಂಬಂಧ ಗುರುವಾರ ಕೊಪ್ಪಳ ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಾಯಿತು. ಈ ವೇಳೆ ಅಸ್ವಸ್ಥಗೊಂಡಿದ್ದ ಅಪರಾಧಿ ರಾಮಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇಂದು ಬೆಳಗ್ಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014 ರ ಅ.28 ರಂದು ಸಂಘರ್ಷ ನಡೆದಿತ್ತು. ದಲಿತರು ಹಾಗೂ ಸವರ್ಣಿಯರ ನಡುವೆ ಗಲಾಟೆ ನಡೆದು ದಲಿತ ಕೇರಿಯ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಹತ್ತು ವರ್ಷಗಳ ವಾದ ಆಲಿಸಿದ ನಂತರ ಈಚೆಗೆ ತೀರ್ಪು ಪ್ರಕಟಗೊಂಡಿತ್ತು. ಗುರುವಾರ 101 ಜನ ಆರೋಪಿತರಿಗೆ ಕೋರ್ಟ್ ಶಿಕ್ಷೆ ವಿಧಿಸಿತು. ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಪರಾಧಿ ರಾಮಪ್ಪ ಅಸ್ವಸ್ಥಗೊಂಡಿದ್ದರು.