ಕುಷ್ಟಗಿ: ಪ್ರತಿಯೊಬ್ಬ ತಂದೆ–ತಾಯಿಗೂ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕೆಂಬ ಆಸೆ ಇರುತ್ತದೆ. ಆದರೆ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ನಿಂಗಪ್ಪ ಜಿಗೇರಿ ಮತ್ತು ರೇಖಾ ಜಿಗೇರಿ ದಂಪತಿಗಳು ತಮ್ಮ ಮಗಳು ದಾನೇಶ್ವರಿ ಅವರ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸಮಾಜಮುಖಿ ರೀತಿಯಲ್ಲಿ ಆಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು ತಮ್ಮ ಮಗಳ ಹುಟ್ಟುಹಬ್ಬವನ್ನು ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಇರುವ ಅಂಗವಿಕಲರು ಹಾಗೂ ಅನಾಥರ ವೃದ್ಧಾಶ್ರಮದಲ್ಲಿ ಸರಳವಾಗಿ ಆಚರಿಸಿದರು. ಆಶ್ರಮದ ನಿವಾಸಿಗಳೊಂದಿಗೆ ಕೇಕ್ ಕತ್ತರಿಸಿ ಸಂತೋಷ ಹಂಚಿಕೊಂಡು, ಎಲ್ಲರಿಗೂ ಒಂದು ದಿನದ ವಿಶೇಷ ಭೋಜನ ವ್ಯವಸ್ಥೆ ಮಾಡಿದರು.
“ದುಂದು ವೆಚ್ಚ ಮಾಡುವುದಕ್ಕಿಂತ ಅಗತ್ಯವಿರುವವರೊಂದಿಗೆ ಸಂತೋಷ ಹಂಚಿಕೊಳ್ಳುವುದೇ ಸಾರ್ಥಕ. ಮಕ್ಕಳಿಗೆ ಬಾಲ್ಯದಲ್ಲೇ ಮಾನವೀಯ ಮೌಲ್ಯಗಳನ್ನು ಕಲಿಸಿದರೆ, ಅವರು ದೊಡ್ಡವರಾದ ಬಳಿಕ ತಂದೆ–ತಾಯಿಗಳನ್ನು ದೂರ ಮಾಡುವುದಿಲ್ಲ” ಎಂದು ನಿಂಗಪ್ಪ ಜಿಗೇರಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ ದರಕ ಹಾಗೂ ಕಾರ್ಯಾಧ್ಯಕ್ಷ ಬಾಲಚಂದ್ರ ಕೆ ಉಪಸ್ಥಿತರಿದ್ದರು. ದಂಪತಿಯ ಈ ನಡೆಗೆ ಆಶ್ರಮದ ಸದಸ್ಯರು ಹಾಗೂ ಸ್ಥಳೀಯರು ಹೃತ್ಪೂರ್ವಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



