ಬೆಳಗಾವಿ:- ಪತಿಯೇ ಪರ ಧೈವ ಎನ್ನುತ್ತಿದ್ದ ಆ ಕಾಲ ಎಲ್ಲಿ? ಪತಿ ಇಲ್ಲದೇ ನಾ ಬಾಳುವೆ ಎನ್ನುವ ಈ ಕಾಲ ಎಲ್ಲಿ?… ಕಾಲ ಕೆಟ್ಟೋಯ್ತು ಮರ್ರೆ. ಗಂಡ-ಹೆಂಡತಿ ಸಂಬಂಧ ಅಂದ್ರೆ ಹಾಲು-ಜೇನು ಇದ್ದಂತೆ ಎಂದು ಹಿರಿಯರು ಹೇಳಿದ್ದಾರೆ. ಎಷ್ಟೇ ಕಷ್ಟ-ಸುಖ ಇದ್ದರೂ ಇವೆರಡನ್ನೂ ಸಮಾನವಾಗಿ ಇಬ್ಬರು ಸ್ವೀಕರಿಸಬೇಕು. ಒಂದು ದೇಹ ಎರಡು ಜೀವ ಎಂಬಂತಿರಬೇಕು. ಆದ್ರೆ ಈಗಿನವರು ಸ್ವಾರ್ಥಿಗಳಾಗಿದ್ದಾರೆ. ಒಂದನ್ನ ಪಡೆಯಲು ಮತ್ತೊಂದನ್ನು ಕಳೆದುಕೊಳ್ಳುತ್ತಿದ್ದಾರೆ.
ಎಸ್ ಅಂತದ್ದೇ ಒಂದು ಸ್ಟೋರಿ ಇಲ್ಲಿದೆ ನೋಡಿ. ವಿಡಿಯೋ ಕಾಲ್ ಮಾಡಿ ಗಂಡನ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಪಾಪಿ ಪತ್ನಿಯನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿ ಬಲೋಗಿ ನಿವಾಸಿ ಶಿವನಗೌಡ ಪಾಟೀಲ್ ಎಂಬಾತನನ್ನು ಇತ್ತೀಚೆಗೆ ಕೊಲೆ ಮಾಡಲಾಗಿತ್ತು. ಕೊಲೆಯಾದ ಶಿವನಗೌಡ ಅವರ ಪತ್ನಿ ಶೈಲಾ ಪಾಟೀಲ್ಗೆ ಹಾಗೂ ಕೊಲೆ ಆರೋಪಿ ರುದ್ರಪ್ಪ ಹೊಸಟ್ಟಿ ಜೊತೆಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ.
ರುದ್ರಪ್ಪ ಮತ್ತು ಶೈಲಾ ನಡುವಿನ ಈ ಸಂಬಂಧದ ಬಗ್ಗೆ ಪತಿ ಶಿವನಗೌಡನಿಗೆ ಗೊತ್ತಾಗಿತ್ತು. ಇದೇ ಕಾರಣಕ್ಕೆ ಆತನ ಸಹವಾಸ ಬಿಡು ಎಂದು ಶಿವನಗೌಡ ತನ್ನ ಪತ್ನಿಗೆ ಬುದ್ಧಿ ಹೇಳಿದ್ದರು.
ಶಿವನಗೌಡ ಅವರು ಪತ್ನಿಯನ್ನು ತವರು ಮನೆಗೆ ಬಿಟ್ಟು ವಾಪಾಸ್ ಆಗುತ್ತಿದ್ದಾಗ, ರುದ್ರಪ್ಪ ಎಣ್ಣೆ ಪಾರ್ಟಿ ಮಾಡಿಸಿ ಶಿವನಗೌಡರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಇದನ್ನು ಪತ್ನಿ ಶೈಲಾ ವಿಡಿಯೋ ಕಾಲ್ ಮೂಲಕ ವೀಕ್ಷಣೆ ಮಾಡಿದ್ದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಗಂಡ ತೀರಿ ಹೋದಾಗ ಆತನ ಶವದ ಮುಂದೆ ಕುಳಿತು ಹಾಡಾಡಿ ಅತ್ತ ಪತ್ನಿಯ ಕಾಲ್ ಹಿಸ್ಟರಿಯಲ್ಲಿ ಆಕೆಯ ಕರಾಳ ಸಂಬಂಧದ ಕುರುಹುಗಳು ಪತ್ತೆಯಾಗಿವೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಯ ಆರೋಪಿಗಳಾದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.