ವಿಜಯಸಾಕ್ಷಿ ಸುದ್ದಿ, ಗದಗ: ದರ್ಗಾ ಎಂದರೆ ಕೇವಲ ಧಾರ್ಮಿಕ ಬಂಧನವಲ್ಲ. ಇದು ಶಾಂತಿ, ಪ್ರೀತಿ, ಸಹಿಷ್ಣುತೆ, ಸಾಮರಸ್ಯ ಹಾಗೂ ಮಾನವೀಯತೆ ಹರಡುವ ಪವಿತ್ರ ತಾಣ. ಇಲ್ಲಿ ಬರುವ ಪ್ರತಿಯೊಬ್ಬರೂ ತಮ್ಮ ಮನದ ಭಾರವನ್ನು ಇಳಿಸಿ ನೆಮ್ಮದಿ ಮತ್ತು ಆಶೀರ್ವಾದವನ್ನು ಪಡೆದು ಹಿಂತಿರುಗುತ್ತಾರೆ ಎಂದು ಗುಲಬರ್ಗಾದ ಸಜ್ಜಾದೇ ನಶಿನ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ದರ್ಗಾದ ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್ಹುಸೇನಿ ಹೇಳಿದರು.
ನಗರದ ಕಾಗದಗಾರ ಓಣಿಯಲ್ಲಿ ಹಜರತ್ ಸೈಯದ್ ಶಾವಲಿ ದರ್ಗಾದ ನವೀಕೃತ ಕಟ್ಟಡ ಹಾಗೂ ನೂತನ ನೆಮ್ಮದಿ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇಂದು ಉದ್ಘಾಟನೆಯಾಗುತ್ತಿರುವ ನೆಮ್ಮದಿ ಕೇಂದ್ರ ನಮ್ಮ ಸಮುದಾಯದ ಕಲ್ಯಾಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆ. ಆರೋಗ್ಯ ತಪಾಸಣೆ, ಮಾರ್ಗದರ್ಶನ, ಸೇವಾ ಕೇಂದ್ರ ಮತ್ತು ಸಾರ್ವಜನಿಕ ನೆರವಿನ ವಿವಿಧ ವಿಭಾಗಗಳ ಮೂಲಕ ಜನರ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆಯನ್ನು ಇಲ್ಲಿ ಒದಗಿಸಲಾಗಿರುವುದು ಸಂತಸ ತಂದಿದೆ. ನಗರಸಭೆಯ 17ನೇ ವಾರ್ಡಿನ ನಗರಸಭೆ ಸದಸ್ಯರಾದ ಆಸ್ಮಾ ಮುನ್ನಾಸಾಬ ರೇಶ್ಮಿ ಹಾಗೂ ಕಾಂಗ್ರೆಸ್ ಯುವ ಮುಖಂಡ ಮುನ್ನಾಸಾಬ ಅ.ರೇಶ್ಮಿ, ಮೊಹ್ಮದಲಿ ಕಾಗದಗಾರ ಜನ್ದಿಸಾಬ ಕಾಗದಗಾರ, ಹಾಮಿದುಲ್ಲಾ ಶಿರಹಟ್ಟಿ, ಮಹ್ಮದಲಿ ದೊಡ್ಡಮನಿ, ಮೆಹಬೂಬ ಕಾಗದಗಾರ, ಮಹ್ಮದರಫೀಕ ದಾಲಾಯತ ಸೇರಿದಂತೆ ಕಾಗದಗೇರಿ ಓಣಿಯ ಸಮಸ್ತ ಗುರು-ಹಿರಿಯರು ಕೈಗೊಂಡ ಒಳ್ಳೆಯ ಕಾರ್ಯ ಸಮಾಜೋಪಯೋಗಿಯಾಗಿದೆ ಎಂದು ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಹೇಳಿದರು.
ಸರಕಾರದ ಮುಖ್ಯ ಸಚೇತಕ ಹಾಗೂ ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ಮಾತನಾಡಿ, ದರ್ಗಾದ ಸೇವಾದಾರರು, ಸಂಘಟಕರು, ಸ್ಥಳೀಯರು ನೀಡಿರುವ ಸಹಕಾರ ಹೆಮ್ಮೆ ಮೂಡಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಜಾದ್ ಕೋ-ಆಪರೇಟೀವ್ ಬ್ಯಾಂಕ್ ಚೇರಮನ್ ಸರಫರಾಜ್ ಎಸ್.ಉಮಚಗಿ ಮಾತನಾಡಿ, ದರ್ಗಾದ ಸೇವಾ ಪರಂಪರೆಯಲ್ಲಿ ಶಿಕ್ಷಣದ ಉತ್ತೇಜನವು ಸದಾ ಮುಖ್ಯವಾಗಿರಬೇಕು. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವಿದ್ಯಾರ್ಥಿ ವೇತನ, ಕೌಶಲ್ಯಾಭಿವೃದ್ಧಿ ಮತ್ತು ಸಮಾಜಮುಖಿ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಯುವ ಮುಖಂಡ ಮುನ್ನಾಸಾಬ ರೇಶ್ಮಿ ಮಾತನಾಡಿ, ಹಜರತ್ ಸೈಯದ್ ಶಾವಲಿ ದರ್ಗಾದ ನವೀಕರಿಸಲಾದ ಕಟ್ಟಡ ಹಾಗೂ ನೂತನ ನೆಮ್ಮದಿ ಭವನ ನಿರ್ಮಾಣಕ್ಕೆ ಅನುದಾನ ನೀಡಿ ಸಮಾಜಬಾಂಧವರಿಗೆ ಅನುಕೂಲ ಕಲ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹಾಗೂ ಗಣ್ಯರನ್ನು ಶ್ಲಾಘಿಸಿದರು.
ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಮಹಾರಾಷ್ಟ್ರದ ಸಜ್ಜಾದೇ ನಶೀನ ನಿಲಂಗಾ ಶರೀಫನ ಹಜರತ್ ಸಯ್ಯದ್ ಹೈದರಪಾಷಾ ಖಾದರಿ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಆಸ್ಮಾ ಮುನ್ನಾಸಾಬ ರೇಶ್ಮಿ, ಜೈನುಲಾಬ್ದೀನ್ ಆರ್.ನಮಾಜಿ, ಬರಕತಅಲಿ ಮುಲ್ಲಾ, ಪರವೀನಬಾನು ಮುಲ್ಲಾ, ಧಾರವಾಡದ ಕುತುಬಅಲಿಶಾ ಮದಾರಿ, ಗಣ್ಯರಾದ ಖಲಂದರ ಗೌಸುಸಾಬ ರೆಹಮಾನವರ, ಪ್ರಭು ಬುರಬುರೆ, ಈಶ್ವರಸಾ ಮೇರವಾಡೆ, ರತ್ನಾಕರಭಟ್ ಜೋಶಿ, ಎಸ್.ಡಿ. ಮಕಾನದಾರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಅನಿಲ ಸಿದ್ದಮ್ಮನಹಳ್ಳಿ, ಇಂಜಿನಿಯರ್ ಎ.ಎಚ್. ಹೊಸಳ್ಳಿ, ಅಬ್ದುರ್ರಜಾಕ್ ಡಂಕೇದ, ಮೊಹ್ಮದಯುಸುಫ್ ಇಟಗಿ, ಮೀರಾಸಾಬ ಕಲ್ಯಾಣಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಜ್ಜಾದೇ ನಶಿನ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ದರ್ಗಾದ ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಅವರು ಧಾರ್ಮಿಕ ಮಂತ್ರೋಚ್ಛಾರಣೆ ಮಾಡಿದರು. ಜಿಲ್ಲಾ ಸರಕಾರಿ ವಕೀಲರಾದ ಎಂ.ಎ. ಕುಕನೂರ ಸ್ವಾಗತಿಸಿದರು. ಎಂ.ಎ. ಶಿರಹಟ್ಟಿ, ಅಲ್ಲಾಭಕ್ಷ ಕೊಟಗಿ ಕಾರ್ಯಕ್ರಮ ನಿರೂಪಿಸಿದರು. ಮಹ್ಮದಲಿ ರೆಹಮಾನಸಾಬ ಕಾಗದಗಾರ ವಂದಿಸಿದರು.
ಬಾಕ್ಸ್
ಕಟ್ಟಡ ಹಾಗೂ ನೂತನ ನೆಮ್ಮದಿ ಭವನ ಉದ್ಘಾಟನೆ ನೆರವೇರಿಸಿದ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಮಾತನಾಡಿ, ನಮ್ಮ ಗದಗ ಶತಮಾನಗಳಿಂದ ಸಾಮಾಜಿಕ ಸಾಮರಸ್ಯ ಮತ್ತು ಭಕ್ತಿ-ಭಾವಗಳ ಸಂಕೇತವಾಗಿದ್ದು, ಈ ಹೊಸ ಕೇಂದ್ರ ಅದರ ಸೇವಾ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲಿದೆ ಎಂದರು.


