ಫೆಬ್ರವರಿ 16ರಂದು ಹುಟ್ಟುಹಬ್ಬ ಆಚರಿಸಿಕೊಂಡ ನಟ ದರ್ಶನ್ ಎರಡು ದಿನಗಳ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ಜೊತೆ ಸಿಂಪಲ್ ಆಗಿ ಬರ್ತಡೇ ಆಚರಿಸಿಕೊಂಡಿದ್ದ ದಾಸ ಅಭಿಮಾನಿಗಳಿಗೆ ಸಮಾಜ ಮುಖಿ ಕೆಲಸಗಳನ್ನು ಮಾಡಲು ಮನವಿ ಮಾಡಿದ್ದರು. ಇದೀಗ ಅಭಿಮಾನಿಗಳ ಕೆಲಸವನ್ನುದ ಕೊಂಡಾಡಿರುವ ದಾಸ ಸಾಲು ಸಾಲು ಫೋಟೋಗಳನ್ನು ಪೋಸ್ಟ್ ಮಾಡಿ ಧನ್ಯವಾದ ಹೇಳಿದ್ದಾರೆ.
ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದೇ ಕರೆಯುತ್ತಾರೆ. ಇದೀಗ ನಟ ದರ್ಶನ್ ಸದಾ ತನ್ನ ಬೆನ್ನಿಗೆ ನಿಂತ ಅಭಿಮಾನಿಗಳ ಬೆನ್ನು ತಟ್ಟುವ ಕೆಲಸ ಮಾಡಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಅಭಿಮಾನಿಗಳಿಗೆ ದರ್ಶನ್ ಧನ್ಯವಾದ ಹೇಳಿದ್ದಾರೆ. ದರ್ಶನ್ ಅಭಿಮಾನಿಗಳ ಸಂಘದವರು ನಟನ ಹುಟ್ಟುಹಬ್ಬದ ದಿನ ಹಲವು ಒಳ್ಳೆಯ ಕೆಲಸ ಮಾಡಿದ್ದಾರೆ. ಅಭಿಮಾನಿಗಳ ಉತ್ತಮ ಕೆಲಸವನ್ನು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಕೊಂಡಾಡಿದ್ದಾರೆ.
ದರ್ಶನ್ ಹೆಸರಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಿದ್ದಾರೆ. ವಿಶೇಷ ಚೇತನ ಮಕ್ಕಳ ಕೈಯಲ್ಲಿ ಕೇಕ್ ಕಟ್ ಮಾಡಿಸಿ ಅವರಿಗೆ ಕೆಲ ಗಿಫ್ಟ್ ನೀಡಿದ್ದಾರೆ. ಜೊತೆಗೆ ವೃದ್ಧರಿಗೆ ಅಗತ್ಯ ವಸ್ತು ನೀಡಿದ್ದಾರೆ. ಹಲವೆಡೆ ಅಭಿಮಾನಿಗಳು ದಾಸನ ಹೆಸರಲಿ ಅನ್ನ ದಾಸೋಹದಂತಹ ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಅವುಗಳ ಫೋಟೋಗಳನ್ನು ನಟ ಹಂಚಿಕೊಂಡಿದ್ದಾರೆ.
ಸುಮಾರು ಹದಿನೈದಕ್ಕೂ ಹೆಚ್ಚು ಫೋಟೋಗಳನ್ನು ಶೇರ್ ಮಾಡಿದ ನಟ ದರ್ಶನ್, ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.