ಬೆಂಗಳೂರು: ಹೆಚ್ಚುವರಿ ದಿಂಬು ಹಾಗೂ ಬೇಡ್ಶೀಟ್ ಸೌಲಭ್ಯ ಒದಗಿಸಿಲ್ಲ ಎಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್, ಕಳೆದ ಕೆಲವು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾನೂನು ಕಾದಾಟದಲ್ಲಿದ್ದಾರೆ.
ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳಾದ ಹಾಸಿಗೆ, ತಲೆದಿಂಬು ಮತ್ತು ಇತರ ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವಂತೆ ಕೋರಿ ಅವರು ಈ ಹಿಂದೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ಕೋರ್ಟ್, ಜೈಲಾಧಿಕಾರಿಗಳಿಗೆ ಹಾಸಿಗೆ ಮತ್ತು ತಲೆದಿಂಬು ಒದಗಿಸುವಂತೆ ಆದೇಶಿಸಿತ್ತು. ಆದರೆ, ಕೋರ್ಟ್ನ ಆದೇಶದ ಹೊರತಾಗಿಯೂ, ಜೈಲಾಧಿಕಾರಿಗಳು ಈವರೆಗೆ ಯಾವುದೇ ಸೌಲಭ್ಯವನ್ನು ಒದಗಿಸಿಲ್ಲ ಎಂದು ದರ್ಶನ್ ಆರೋಪಿಸಿದ್ದಾರೆ.
ದರ್ಶನ್ ಅವರು ತಮ್ಮ ಎರಡನೇ ಅರ್ಜಿಯಲ್ಲಿ, ಜೈಲಾಧಿಕಾರಿಗಳು ಕೋರ್ಟ್ ಆದೇಶವನ್ನು ಪಾಲಿಸದಿರುವುದರಿಂದ ತಾವು ತೀವ್ರ ತೊಂದರೆಗೆ ಒಳಗಾಗಿರುವುದಾಗಿ ದೂರಿದ್ದಾರೆ. ಜೈಲಿನಲ್ಲಿ ಕನಿಷ್ಠ ಮೂಲಭೂತ ಸೌಕರ್ಯವಿಲ್ಲದೆ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ 57ನೇ ಸಿಎಂಎಂ ಕೋರ್ಟ್, ವಾದ-ಪ್ರತಿವಾದಗಳನ್ನು ಆಲಿಸಿತ್ತು. ಸೆಪ್ಟೆಂಬರ್ 19ರಂದು ಆದೇಶ ನೀಡುವುದಾಗಿ ಹೇಳಿದ್ದ ಕೋರ್ಟ್, ಇದೀಗ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ.