ಕಲಬುರಗಿ:-ನನ್ನ ಮಗಳಿಗೆ ವರದಕ್ಷಿಣೆ ತರುವಂತೆ ಕಿರುಕುಳ, ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ಆರೋಪಿಸಿರುವ ತಂದೆಯೋರ್ವ ಮಗಳ ಪತಿ ಕುಟುಂಬದವರ ಪತ್ತೆಗಾಗಿ ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಅಳವಡಿಕೆ ಮಾಡಿ ಆಕ್ರೋಶ ಹೊರ ಹಾಕಿದ ಘಟನೆ ಜರುಗಿದೆ.
ಆಕೆಯ ಪತಿ, ಅತ್ತೆ ಮತ್ತು ಇಬ್ಬರು ನಾದಿನಿಯರು ನನ್ನ ಮಗಳನ್ನು ಸಾಯಿಸಿ ಪರಾರಿಯಾಗಿದ್ದಾರೆ. ಈ ನಾಲ್ವರು ಕಂಡುಬಂದರೆ ತಮಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಸ್ಥಳದಲ್ಲಿ ನಾಲ್ವರ ಭಾವಚಿತ್ರಗಳ ಸಹಿತ ಬ್ಯಾನರ್ ಅವಳವಡಿಕೆ ಮಾಡಿ ಮನವಿ ಮಾಡಿದ್ದಾರೆ.
ಕಲಬುರಗಿಯ ಹುಮನಬಾದ್ ರಿಂಗ್ ರೋಡ್ನ ಟಿಪ್ಪು ಚೌಕ್ ಸಮೀಪದಲ್ಲಿ ಮೃತಳ ತಂದೆ ಚನ್ನಪ್ಪಗೌಡ ಈ ಬ್ಯಾನರ್ ಹಾಕಿದ್ದಾರೆ. ಇವರು ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಾಲ್ ತಾಲ್ಲೂಕಿನ ಗುಡೆಬಲ್ಲೂರು ನಿವಾಸಿ ಎನ್ನಲಾಗಿದೆ.
ಚನ್ನಪ್ಪಗೌಡ ಎಂಬ ವ್ಯಕ್ತಿ ತನ್ನ ಒಬ್ಬಳೇ ಮಗಳು ವಿಜಯಲಕ್ಷ್ಮಿಯನ್ನು ಐದು ವರ್ಷಗಳ ಹಿಂದೆ ಸೇಡಂ ತಾಲ್ಲೂಕಿನ ಶಂಕರಪಲ್ಲಿ ಗ್ರಾಮದ ಶಂಕರೆಡ್ಡಿ ಜೊತೆ ಮದುವೆ ಮಾಡಿದ್ದ. 2023ರ ಅಕ್ಟೋಬರ್ 23 ರಂದು ಮಗಳು ಮೃತಪಟ್ಟಳು. ಶಂಕರೆಡ್ಡಿ ತಂಗಿ ವೈದ್ಯಯಾಗಿದ್ದರಿಂದ ವರದಕ್ಷಿಣೆ ಕಿರುಕುಳಕ್ಕೆ ನನ್ನ ಮಗಳಿಗೆ ಏನಾದರೂ ಮಾಡಿರಬಹುದು ಎಂಬ ಅನುಮಾನ ಬಂದಿತ್ತು.
ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಸಾಯಿಸಿದ್ದಾರೆ. ಮಗಳ ಸಾವಿಗೆ ಪ್ರತಿಯಾಗಿ ಎರಡು ವರ್ಷದ ಮೊಮ್ಮಗಳನ್ನು ನಿಮಗೆ ಕೊಡುತ್ತೇವೆ. ಅವಳ ಪೋಷಣೆಗಾಗಿ 10 ಎಕರೆ ಜಮೀನು,30 ತೊಲ ಬಂಗಾರ, ₹10 ಲಕ್ಷ ಕೊಡುವುದಾಗಿ ಶಂಕರರೆಡ್ಡಿ ಕುಟುಂಬಸ್ಥರು ಪಂಚರ ಸಮ್ಮುಖದಲ್ಲಿ ಹೇಳಿದ್ದಾರೆ.
ಕಾಗದದ ಮೇಲೆ ಒಪ್ಪಂದದ ಪತ್ರ ಬರೆದುಕೊಟ್ಟರು. ಈಗ ಬಿಳಿ ಕಾಗದ ಒಪ್ಪಂದಕ್ಕೆ ಮಾನ್ಯತೆ ಇಲ್ಲ ಎಂದು ಮೊಮ್ಮಗಳನ್ನು ಕೊಡದೆ ತಲೆ ಮರೆಸಿಕೊಂಡಿದ್ದಾರೆ. ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸ್ಪಂದಿಸುತ್ತಿಲ್ಲ. ಮಗಳು ಮೃತಪ್ಪಟ್ಟಾಗಲೇ ದೂರು ದಾಖಲಿಸಬೇಕಿತ್ತು. ಈಗ ಬರುವುದಿಲ್ಲ ಎನ್ನುತ್ತಿದ್ದಾರೆ.
ಮಗಳನ್ನು ಕಳೆದುಕೊಂಡಿದ್ದೇವೆ. ಮೊಮ್ಮಗಳನ್ನಾದರೂ ಕೊಡಲಿ ಎಂದು ಕಲಬುರಗಿ, ಸೇಡಂ, ಶಂಕರಪಲ್ಲಿಯಲ್ಲಿ ಬ್ಯಾನರ್ಗಳನ್ನು ಕಟ್ಟಿದ್ದೇನೆ ಎಂದು ಮೃತಳ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.