ರಾಮನಗರ:– ಡಿಸಿಎಂ ಶಿವಕುಮಾರ್ ಸ್ವಕ್ಷೇತ್ರ ಕನಕಪುರದಲ್ಲಿ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ಮೇಲೆ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನವಾಜ್, ಕಬೀರ್, ಸುಯೋಲ್, ನಯಾಜ್ ಮತ್ತು ಮಹಿಳೆ ಎನ್ನಲಾಗಿದೆ. ಘಟನೆ ಸಂಬಂಧ ಎರಡು ಪ್ರತ್ಯೇಕ ಎಫ್ಐಆರ್ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಇಂದಿರಾನಗರದಲ್ಲಿ ಅಕ್ರಮ ಸಂಬಂಧ ಹಿನ್ನೆಲೆ ಹಿಂದೂ ವ್ಯಕ್ತಿ ಹಾಗೂ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಜರುಗಿತ್ತು. ಹಲ್ಲೆ ಮಾಡುವುದಲ್ಲದೇ ಮಹೇಶ್ ಹಾಗೂ ಹಸೀನಾ ಬಾನು ತಲೆ ಬೋಳಿಸಿ ಆರೋಪಿಗಳು ಅಟ್ಟಹಾಸ ಮೆರೆದಿದ್ದರು.
ಮಹಿಳೆಯ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಕೃತ್ಯವೆಸಗಲಾಗಿದೆ. ತಕ್ಷಣ ಹಲ್ಲೆಗೊಳಗಾದವರನ್ನು ರಕ್ಷಣೆ ಮಾಡಿ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ಮಹೇಶ್ ಹಾಗೂ ಹಸೀನಾ ಬಾನು ದೂರಿನ ಅನ್ವಯ ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದು, ನೊಂದಿತರಿಬ್ಬರೂ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಇದನ್ನ ಸಹಿಸಲು ಆಗದೇ ಮಹಿಳೆ ಕಡೆಯವರು ಕರೆತಂದು ಹಲ್ಲೆ ನಡೆಸಿ ತಲೆ ಬೋಳಿಸಿದ್ದಾರೆ ಎಂದಿದ್ದಾರೆ.
ಸದ್ಯ ನೈತಿಕ ಪೊಲೀಸ್ ಗಿರಿ ನಡೆದಿದೆ. ಹೀಗಾಗಿ ತಕ್ಷಣ ಕ್ರಮ ತೆಗೆದುಕೊಂಡಿದ್ದೇವೆ. ಪ್ರಕರಣ ಸಂಬಂಧ ಐವರನ್ನ ಬಂಧಿಸಲಾಗಿದೆ. ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.