ರಾಮನಗರ:- ಹುಡುಗಿಯರ ಫೋಟೋ ಕ್ಲಿಕ್ಕಿಸುತ್ತಿದ್ದವರ ಪ್ರಶ್ನಿಸಿದ್ದಕ್ಕೆ ಲೋಕಲ್ ಹುಡುಗರು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅದರಲ್ಲಿ ಓರ್ವ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಘಟನೆ ತಾಲೂಕಿನ ಚಿಕ್ಕೇನಹಳ್ಳಿ ಫಾರ್ಮ್ಹೌಸ್ನಲ್ಲಿ ನಡೆದಿದೆ. 21 ವರ್ಷದ ಪುನೀತ್ ಮೃತ ದುರ್ದೈವಿ. ಬೆಂಗಳೂರು ಮೂಲದ 7 ವಿದ್ಯಾರ್ಥಿಗಳು ರಜಾ ದಿನ ಕಳೆಯಲು ರಾಮನಗರ ತಾಲೂಕಿನ ಚಿಕ್ಕೇನಹಳ್ಳಿ ಫಾರ್ಮ್ಹೌಸ್ಗೆ ಹೋಗಿದ್ದರು. ಫಾರ್ಮ್ಹೌಸ್ನಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯರ ಪೋಟೊ ಕ್ಲಿಕ್ಕಿಸಲು ಸ್ಥಳೀಯ ಯುವಕರು ಬಂದಿದ್ದರು.
ಫೋಟೋ ತೆಗೆಯಲು ಮುಂದಾದ ಯುವಕರನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ವಿದ್ಯಾರ್ಥಿಗಳ ಮೇಲೆ ಯುವಕರು ಕೈ ಮಾಡಿದ್ದಾರೆ. ಪುನೀತ್ ಎಂಬ ವಿದ್ಯಾರ್ಥಿಯ ತಲೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರಿಗೆ ಯುವಕರು ಮಾಹಿತಿ ನೀಡಿದ್ದಾರೆ. ಕಳೆದ ಅ.26 ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ಪುನೀತ್ ಎಂಬಾತನನ್ನು ಕೆಂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ಅ.29ರಂದು ಪುನೀತ್ ಸಾವನ್ನಪ್ಪಿದ್ದಾನೆ.
ಇಂದು ಯುವಕನ ಅಂಗಾಂಗ ದಾನ ಮಾಡಲಾಗಿದೆ.