ಬೆಂಗಳೂರು: ನಗರದಲ್ಲಿ ಆಡಳಿತಾತ್ಮಕ ವೈಫಲ್ಯದ ಗಂಭೀರ ಉದಾಹರಣೆ ಬೆಳಕಿಗೆ ಬಂದಿದ್ದು, ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಕಿಡಿಕಾರಿದೆ. ಮರಣ ಪ್ರಮಾಣ ಪತ್ರವನ್ನು ತಕ್ಷಣ ರದ್ದುಪಡಿಸಿ, ಅದರ ಕುರಿತು ಮಾ.25ರೊಳಗೆ ಹಿಂಬರಹ ಸಲ್ಲಿಸುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಡಿ. ಮೆಹಬೂಬ್ ಬಾಷಾ ಎಂಬವರು ಜೀವಂತವಾಗಿದ್ದರೂ, 2025ರ ಏಪ್ರಿಲ್ 23ರಂದು ಬಿಬಿಎಂಪಿ ಚಿಕ್ಕಪೇಟೆ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿಯು ಅವರ ಹೆಸರಿನಲ್ಲಿ ತಾತ್ಕಾಲಿಕ ಮರಣ ಪ್ರಮಾಣ ಪತ್ರ ನೀಡಿರುವುದು ಪ್ರಕರಣದ ಮೂಲವಾಗಿದೆ. ಇದನ್ನು ರದ್ದುಪಡಿಸುವಂತೆ ಕೋರಿ ಅವರು ಹೈಕೋರ್ಟ್ ಮೊರೆಹೋದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಓ. ಅಶ್ವಿನಿ, “ಅರ್ಜಿದಾರರು ಜೀವಂತವಾಗಿದ್ದರೂ ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಲಾಗಿದೆ. ಅವರ ಆಧಾರ್ ಕಾರ್ಡ್ ಪಡಿತರ ಚೀಟಿಗೆ ಲಿಂಕ್ ಆಗಿರುವುದರಿಂದ, ಇದೀಗ ಅವರಿಗೆ ಪಡಿತರ ಸಿಗುತ್ತಿಲ್ಲ” ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠ, “ಮರಣ ಪ್ರಮಾಣ ಪತ್ರವನ್ನು ತಕ್ಷಣ ರದ್ದುಪಡಿಸಿ, ಬುಧವಾರದೊಳಗೆ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದೆ.
ಇದೇ ವೇಳೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿಯ ಸಂಬಂಧಿತ ಅಧಿಕಾರಿಗಳು, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ.



