ಬೆಳಗಾವಿ: ಹೆಣ್ಣುಮಗು ಜನಿಸಿದ ಕಾರಣಕ್ಕೆ 15 ದಿನದ ಹಸುಗೂಸಿಗೆ ವಿಷವುಣಿಸಿ ಹತ್ಯೆ ಮಾಡಿದ ಆರೋಪದಡಿ ತಂದೆಯನ್ನು ಪೊಲೀಸರು ಬಂಧಿಸಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಮಾರ್ಚ್ 17ರಂದು ಈ ಘಟನೆ ನಡೆದಿದ್ದು, ಭೀಮರಾಯ ಚಿಪ್ಪಾಡೆ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈ ಕುರಿತು ಮಗುವಿನ ತಾಯಿ ಶೀಲಾ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮಾಹಿತಿಯ ಪ್ರಕಾರ, ಒಂದು ವರ್ಷದ ಹಿಂದೆ ಭೀಮರಾಯ ಮತ್ತು ಶೀಲಾ ವಿವಾಹವಾಗಿದ್ದು, ಇತ್ತೀಚೆಗೆ ಅವರಿಗೆ ಹೆಣ್ಣುಮಗು ಜನಿಸಿತ್ತು. ಆದರೆ ಗಂಡು ಮಗುವಿನ ಆಸೆ ಹೊಂದಿದ್ದ ಭೀಮರಾಯ, ಹೆಣ್ಣುಮಗು ಜನಿಸಿದ ಕಾರಣ ಅಸಮಾಧಾನಗೊಂಡಿದ್ದನು ಎನ್ನಲಾಗಿದೆ.
ಘಟನೆ ದಿನ ಪತ್ನಿಯ ತವರಿನಲ್ಲಿ ಇದ್ದ ಭೀಮರಾಯ, ಮಗುವನ್ನು ನೋಡಿ ತೆರಳಿದ ಕೆಲವೇ ಸಮಯದಲ್ಲಿ ಮಗು ಅಸ್ವಸ್ಥಗೊಂಡಿತ್ತು. ತಕ್ಷಣವೇ ಮಗುವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಪ್ರಾಥಮಿಕವಾಗಿ ಹತ್ತಿ ಬೆಳೆಗಳಿಗೆ ಬಳಸುವ ಕೀಟನಾಶಕವನ್ನು ಮಗುವಿಗೆ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪ ಎದುರಿಸುತ್ತಿದ್ದ ಭೀಮರಾಯ ಘಟನೆಯ ನಂತರ ಪರಾರಿಯಾಗಿದ್ದನು. ಬಳಿಕ ಪೊಲೀಸರು ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.



