ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಖಾಸಗಿ ಅನುದಾನಿತ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಲು, ಹಾವೇರಿ ಜಿಲ್ಲಾ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳತ ಮಂಡಳಿಗಳ ಒಕ್ಕೂಟ ಕಳೆದ ಹಲವಾರು ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಾ ಬಂದಿದ್ದು, ಆಳುವ ಎಲ್ಲಾ ಪಕ್ಷದ ಸರ್ಕಾರಗಳು ಅನುದಾನಿತ ಶಾಲಾ-ಕಾಲೇಜುಗಳನ್ನು ನಿರ್ಲಕ್ಷಿಸುತ್ತಾ ಬಂದಿವೆ.
ಕಾರಣ, ಖಾಸಗಿ ಆಡಳಿತ ಮಂಡಳಗಳು ಇನ್ನೂ ಎಷ್ಟು ದಿವಸ ಮಕ್ಕಳ ಶಿಕ್ಷಣಕ್ಕೆ ಹಣ ಜೋಡಿಸಬೇಕು ಎಂಬುದು ಯಕ್ಷ ಪಶ್ನೆಯಾಗಿದೆ. ಆಳುವ ಪ್ರಭುಗಳು ನಮ್ಮ ಮನವಿಗೆ ಸ್ಪಂದಿಸುವ ಪರಿಸ್ಥಿತಿಯಲ್ಲಿಲ್ಲವಾದ್ದರಿಂದ ಸರ್ಕಾರದ ಈ ಧೋರಣೆಯನ್ನು ಪ್ರತಿಭಟಿಸಲು ಇತ್ತೀಚೆಗೆ ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ನಡೆದ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಗಳ ಒಕ್ಕೂಟದ ಅಧ್ಯಕ್ಷ ಎ.ಎಸ್. ಬಳ್ಳಾರಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತುರ್ತು ಬೇಡಿಕೆಗಳನ್ನು ಈಡೇರಿಸಲು ಅನುದಾನಿತ ಶಾಲಾ ಕಾಲೇಜುಗಳನ್ನು ಅನಿರ್ದಿಷ್ಟ ಅವಧಿಗೆ ಬಂದ್ ಮಾಡಲು ತೀರ್ಮಾನಿಸಿದೆ ಎಂದು, ಒಕ್ಕೂಟದ ಉಪಾದ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಡೀ ಉತ್ತರ ಕರ್ನಾಟಕದ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳ ಸೂಕ್ತ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಸಭೆಯನ್ನು ಇಷ್ಟರಲ್ಲಿಯೇ ಹುಬ್ಬಳಿಯಲ್ಲಿ ಕರೆದು, ಎಲ್ಲರ ವಿಶ್ವಾಸ ಪಡೆದು ಅನಿರ್ದಿಷ್ಟ ಅವಧಿವರೆಗೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲು ದಿನಾಂಕವನ್ನು ನಿಗದಿ ಮಾಡಲಾಗುವುದು, ಈ ಸಭೆಗೆ ಎಲ್ಲಾ ಅನುದಾನಿತ ಶಾಲಾ ಪ್ರತಿನಿಧಿಗಳು ಹಾಜರಿದ್ದು ಸೂಕ್ತ ಸಲಹೆ ನೀಡಿ ಸಹಕರಿಸಬೇಕೆಂದು ಒಕ್ಕೂಟದ ಅಧ್ಯಕ್ಷ ಎ.ಎಸ್. ಬಳ್ಳಾರಿ, ಕಾರ್ಯದರ್ಶಿ ಬಸವರಾಜ್ ಹಾದಿಮನಿಯವರು ಸೂಚನೆ ನೀಡಿದ್ದಾರೆಂದು ಡಾ. ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ.