ವಿಜಯಸಾಕ್ಷಿ ಸುದ್ದಿ, ಗದಗ: ಸೆ. 21 ರಂದು ಗದಗ ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಗದಗ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಗದಗ ಜಿಲ್ಲಾ ಹಾಲು ಒಕ್ಕೂಟ (ಕೆಎಂಎಫ್) ಸ್ಥಾಪನೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸುವುದಾಗಿ ಕರವೇ ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ತಿಳಿಸಿದ್ದಾರೆ.
Advertisement
ಗದಗ ಜಿಲ್ಲೆಯಾಗಿ ಸುಮಾರು 27 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಗದಗ ಜಿಲ್ಲೆಯಲ್ಲಿ ಸ್ಥಾಪನೆಯಾಗಿಲ್ಲ. ಗದಗ ಜಿಲ್ಲೆಯ ಜನತೆ ಇಂದಿಗೂ ಧಾರವಾಡಕ್ಕೆ ಹೋಗುವ ಸ್ಥಿತಿ ಇದೆ. ಆದ್ದರಿಂದ, ಮುಖ್ಯಮಂತ್ರಿಗಳು ಗದಗ ಜಿಲ್ಲೆಗೆ ನೂತನವಾಗಿ ಡಿಸಿಸಿ ಬ್ಯಾಂಕನ್ನು ಮಂಜೂರು ಮಾಡಬೇಕು ಹಾಗೂ ಗದಗ ಜಿಲ್ಲಾ ಹಾಲು ಒಕ್ಕೂಟವನ್ನು (ಕೆಎಂಎಫ್) ಪ್ರತ್ಯೇಕವಾಗಿ ಸ್ಥಾಪನೆ ಮಾಡಬೇಕೆಂದು ಮನವಿ ಸಲ್ಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.