ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿರ್ಮಾಣಗೊಂಡ ನೂತನ ಗಣಪತಿ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜುಲೈ 26, 27 ಮತ್ತು 28ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ್ ಹೇಳಿದರು.
ಅವರು ಭಾನುವಾರ ಈ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜ.ಶ್ರೀ ವೀರಗಂಗಾಧರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡಬೇಕೆನ್ನುವ ಇಚ್ಛೆಯನ್ನು ವ್ಯಾಪಾರಸ್ಥರು ಹೊಂದಿದ್ದರು. ಅದಕ್ಕಾಗಿ ಎಪಿಎಂಸಿ ವರ್ತಕರೆಲ್ಲ ದೇಣಿಗೆ ಸಂಗ್ರಹಿಸಿ ವರ್ಷದ ಹಿಂದೆ ದೇವಸ್ಥಾನ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದರು. ಸಂಪೂರ್ಣವಾಗಿ ಕೊಲ್ಲಾಪುರದ ಹತ್ತಿರ ದೊರೆಯುವ ಜ್ಯೋತಿರ್ಭಾ ಕಲ್ಲುಗಳಿಂದ ಅಲ್ಲಿನ ಶಿಲ್ಪಿಗಳಿಂದ ರಾಮಮಂದಿರ ಸ್ವರೂಪದ ದೇವಸ್ಥಾನ ನಿರ್ಮಾಣ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಎಸ್.ಕೆ. ಕಾಳಪ್ಪನವರ ಮಾತನಾಡಿ, ರಂಭಾಪುರಿ ಜ. ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಕೃಪಾಶೀರ್ವಾದ ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ದೇವಸ್ಥಾನ ಲೋಕಾರ್ಪಣೆ ನಡೆಯಲಿದೆ. ಜು. 26ರಂದು ಗಣಪತಿ, ಈಶ್ವರ, ಬಸವಣ್ಣ, ಆಂಜನೇಯ ಹಾಗೂ ನಾಗದೇವತೆಗಳ ಮೂರ್ತಿಗಳ ಮೆರವಣಿಗೆ, ಜು.27ರಂದು ಹೋಮ, ಹವನ, ಪೂಜೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಜು.28ರಂದು ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನ ಲೋಕಾರ್ಪಣೆ ಮತ್ತು ಅಂದೇ 12 ಗಂಟೆಗೆ ಧರ್ಮ ಸಭೆ ನಡೆಯಲಿದೆ. ಅನೇಕ ಮಠಾಧೀಶರು, ಸಂಸದರು, ಶಾಸಕರು, ಮಾಜಿ ಶಾಸಕರು, ಪುರಸಭೆ ಅಧ್ಯಕ್ಷರು, ಜನ ಪ್ರತಿನಿಧಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಮೂರು ದಿನಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಈ ವೇಳೆ ಮಹಾದೇವಪ್ಪ ರಗಟಿ, ಸಿದ್ದನಗೌಡ ಬಳ್ಳೊಳ್ಳಿ, ಸಂಗಣ್ಣ ಹನುಮಸಾಗರ, ಶಿವಯೋಗಿ ಗಡ್ಡದೇವರಮಠ, ಬಸವರಾಜ ಮಹಾಂತಶೆಟ್ಟರ, ಗಣೇಶ ಬೇವಿನಮರದ, ತೋಂಟೇಶ ಮಾನ್ವಿ, ವಿಜಯಕುಮಾರ ಹತ್ತಿಕಾಳ, ಸಂತೋಷ ಬಾಳಿಕಾಯಿ, ರಾಜು ಕೊಟಗಿ, ಪುಲಕೇಶಿ ಉಪನಾಳ, ಶಿವಯೋಗಿ ವಡಕಣ್ಣವರ, ವಿಜಯ ಬೂದಿಹಾಳ, ರಾಘವೇಂದ್ರ ಸದಾವರ್ತಿ ಸೇರಿದಂತೆ ಅನೇಕರಿದ್ದರು.
ರಾಜಸ್ಥಾನದ ಜೈಪೂರ ವೈಟ್ ಮಾರ್ಬಲ್ನಿಂದ ಸುಂದರ ಗಣೇಶನ ಮೂರ್ತಿ ನಿರ್ಮಾಣವಾಗಿದೆ. ದೇವಸ್ಥಾನದ ಪ್ರಾಂಗಣದಲ್ಲಿನ ವಿವಿಧ ದೇವರ ಮೂರ್ತಿಗಳನ್ನು ಲಕ್ಕುಂಡಿಯ ಕಲಾವಿದರು ನಿರ್ಮಿಸಿದ್ದಾರೆ. ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿಸಲಾಗುತ್ತಿದೆ. ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಓಂಪ್ರಕಾಶ ಜೈನ್ ಮನವಿ ಮಾಡಿದರು.