ಗದಗ: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ವಿಮೆ ಪಾವತಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಗದಗ ನಗರದ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ಕಚೇರಿ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿಗೆ ಸಂಬಂಧಿಸಿದಂತೆ ಕಂಪನಿಯ ಕಚೇರಿಯಿಂದ ಕಂಪ್ಯೂಟರ್, ಫರ್ನಿಚರ್ ಸೇರಿದಂತೆ ಹಲವಾರು ಕಚೇರಿ ಉಪಕರಣಗಳು ವಶಕ್ಕೆ ಪಡೆಯಲಾಗಿದೆ.
ಗದಗ ನಗರದ ಅಂಜುಮನ್ ಕಾಲೇಜ್ ಬಳಿ ಬೈಕ್ ಹಾಗೂ ಕಾರು ನಡುವೆ 11-06-2023ರಂದು ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಹನುಮಂತಪ್ಪ ಗಜೇಂದ್ರಗಡ (ವಯಸ್ಸು 56) ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತಕ್ಕೆ ಕಾರಣವಾದ ಕಾರಿಗೆ ‘ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ‘ ಕಂಪನಿಯಲ್ಲಿ ವಿಮೆ ಮಾಡಿಸಲಾಗಿತ್ತು.
ಮೃತ ಹನುಮಂತಪ್ಪ ಗಜೇಂದ್ರಗಡ ಅವರ ಕುಟುಂಬಸ್ಥರು ನಷ್ಟ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇನ್ಶೂರೆನ್ಸ್ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ವಿಮಾ ಕಂಪನಿಗೆ, ಮೃತರ ಕುಟುಂಬಕ್ಕೆ ರೂ. 74 ಲಕ್ಷ ರೂಪಾಯಿ ಮೊತ್ತ ನೀಡುವಂತೆ ಆದೇಶ ಹೊರಡಿಸಿತ್ತು.
ನ್ಯಾಯಾಲಯದ ಆದೇಶ ಪಾಲಸಿದೇ ಕಂಪನಿ ನಿರ್ಲಕ್ಷ್ಯ ತೋರಿದ ಪರಿಣಾಮ, ನ್ಯಾಯಾಲಯದ ಆದೇಶದ ಪ್ರಕಾರ, ಕಂಪನಿಯ ಕಚೇರಿಗೆ ಜಪ್ತಿ ಕ್ರಮ ಜಾರಿಯಾಯಿತು. ಈ ಜಪ್ತಿ ಪ್ರಕ್ರಿಯೆಯನ್ನು ಅರ್ಜಿದಾರರ ಪರವಾಗಿ ನ್ಯಾಯವಾದಿಗಳಾದ ಸಿ.ಆರ್. ವಡಕಣ್ಣವರ ಹಾಗೂ ಕೆ.ಎಂ. ಮುಶಿಗೇರಿ ಹಾಗೂ ಸಿಬ್ಬಂದಿಗಳಾದ ಎಂ.ಬಿ.ಕಂಕೂರ, ವಿ.ಎಂ.ಬೆಣಕಲ್ಲಮಠ ಅವರ ನೇತೃತ್ವದಲ್ಲಿ ನಡೆಸಲಾಯಿತು.