ನವದೆಹಲಿ:- ಸುಳ್ಳು ಭರವಸೆ ಕೊಡುವವರಿಗೆ ದೆಹಲಿ ತಕ್ಕ ಪಾಠ ಕಲಿಸಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ ಕುರಿತು ಮಾತನಾಡಿದ ಅವರು, ದೆಹಲಿಯಲ್ಲಿ ಸುಳ್ಳಿನ ಆಳ್ವಿಕೆ ಕೊನೆಗೊಂಡಿದೆ. ಭರವಸೆ ಮುರಿಯುವವರಿಗೆ ತಕ್ಕ ಪಾಠವಾಗಿದೆ. ದೆಹಲಿಯ ಜನರು ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ ‘ಶೀಷ್ಮಹಲ್’ ಅನ್ನು ನಾಶಮಾಡುವ ಮೂಲಕ ದೆಹಲಿಯನ್ನು ಆಪ್ ಮುಕ್ತಗೊಳಿಸಲು ತೀರ್ಮಾನಿಸಿದ್ದಾರೆ. ಭರವಸೆಗಳನ್ನು ಮುರಿಯುವವರಿಗೆ ದೆಹಲಿ ತಕ್ಕ ಪಾಠ ಕಲಿಸಿದೆ. ಇದು ದೇಶಾದ್ಯಂತ ಸಾರ್ವಜನಿಕರಿಗೆ ಸುಳ್ಳು ಭರವಸೆಗಳನ್ನು ನೀಡುವವರಿಗೆ ಒಂದು ಉದಾಹರಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಆಪ್ ಸೋಲನ್ನು ದುರಹಂಕಾರ ಮತ್ತು ಅರಾಜಕತೆಯ ಸೋಲು ಎಂದು ಕರೆದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ. ಅಲ್ಲದೇ ದೆಹಲಿಯನ್ನು ವಿಶ್ವದ ನಂಬರ್ ಒನ್ ರಾಜಧಾನಿಯನ್ನಾಗಿ ಮಾಡುತ್ತದೆ. ಇದು ‘ಮೋದಿ ಗ್ಯಾರಂಟಿ’ಯ ಗೆಲುವು. ಈ ಬೃಹತ್ ಜನಾದೇಶಕ್ಕಾಗಿ ದೆಹಲಿಯ ಜನರಿಗೆ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು.