ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಸ್ಥಾನದಲ್ಲಿ ಉಷಾ ದಾಸರ ಅವರ ಮೊದಲ 30 ತಿಂಗಳ ಅವಧಿ ಮುಕ್ತಾಯಗೊಂಡಿದ್ದು, ನಂತರ 2ನೇ ಅವಧಿಗೆ ಚುನಾವಣೆ ನಡೆಸಲು ಆಡಳಿತಾತ್ಮಕವಾಗಿ ಕಾಂಗ್ರೆಸ್ ಸರ್ಕಾರ ವಿನಾಕಾರಣ ಕಾಲಹರಣ ಮಾಡುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಉದ್ದೇಶಪೂರ್ವಕವಾಗಿ ಮೀಸಲಾತಿಗಾಗಿ 13/12/2024ರಂದು ಧಾರವಾಡ ಹೈಕೋರ್ಟ್ನಲ್ಲಿ ರಿಟ್ಪಿಟಿಷನ್ ದಾಖಾಲಿಸಿ ಕಾಲಹರಣ ಮಾಡಿತು. ಆದರೆ, ಮಾಡಿದ ಮೀಸಲಾತಿ ಸರಿಯಾಗಿದೆ ಎಂದು ಹೈಕೋರ್ಟ್ ಆದೇಶ ಹೊರಡಿಸಿತು. ನಂತರ ಜಿಲ್ಲಾಡಳಿತದ ಮೇಲೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯ ದಿನಾಂಕವನ್ನು ನಿಗದಿ ಮಾಡದಂತೆ ಚುನಾವಣಾಧಿಕಾರಿಗಳಿಗೆ ಒತ್ತಡ ತಂದು ದಿನಾಂಕ ನಿಗದಿ ಮಾಡದಂತೆ ಮತ್ತೆ ಕಾಲಹರಣ ಮಾಡಿ ಪುನಃ ಹೈಕೋರ್ಟ್ಗೆ ಹೋಗಿ ರಿಟ್ ಅಪೀಲ್ ಮಾಡಿತು.
ರಾಜಕೀಯ ಒತ್ತಡ ತಂದು ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರು, ಜಿಲ್ಲಾಧಿಕಾರಿಗಳ ಮೂಲಕ ಬಿಜೆಪಿಯ 3 ಜನ ನಗರಸಭಾ ಸದಸ್ಯರನ್ನು ಅನರ್ಹಗೊಳಿಸಿ ತಮ್ಮ ಕುತಂತ್ರ ರಾಜಕಾರಣದಿಂದ ಸಮಂಜಸವಾದ ವಿಚಾರಣೆ ಮಾಡದೆ ಶೀಘ್ರಗತಿಯಲ್ಲಿ ಅಮಾನತು ಆದೇಶ ಹೊರಡಿಸಿದ್ದು, ಅಧಿಕಾರ ದುರಪಯೋಗಪಡೆಸಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಹೇಳಿಕೆ ನೀಡಿದ್ದಾರೆ.