ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡದ ಹಿರಿಯ ಕಲಾವಿದ, ಕರುನಾಡು ಚಕ್ರವರ್ತಿ ಶಿವರಾಜಕುಮಾರ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಡೆನೂರು ಮನು ವಿರುದ್ಧ ಹಾಗೂ ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿ ಸಂಘಗಳ ಒಕ್ಕೂಟ, ಡಾ. ಶಿವರಾಜಕುಮಾರ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಗದಗ ಶಹರ ಪಿಎಸ್ಐರವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಂಗಾಪೂರ ಮಾತನಾಡಿ, ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ನಟ ಮಡೆನೂರು ಮನು ಅವರು ದೂರವಾಣಿಯಲ್ಲಿ ನಟಿಯೊಬ್ಬರೊಂದಿಗೆ ಕನ್ನಡದ ಖ್ಯಾತ ನಟ ಶಿವರಾಜಕುಮಾರ ಮತ್ತು ಧೃವ ಸರ್ಜಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸಮಸ್ತ ಕನ್ನಡ ನಾಡಿನ ಜನರ ಮನಸ್ಸುಗಳಿಗೆ ನೋವನ್ನುಂಟುಮಾಡಿದೆ.
ಅಲ್ಲದೇ ತಮಿಳು ಹಿರಿಯ ನಟ ಕಮಲ್ ಹಾಸನ್ ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿರುವುದು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದ್ದಾರೆ. ಇವರಿಬ್ಬರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾಧ್ಯಕ್ಷ ವಿಠ್ಠಲ ಪರಾಪೂರ, ಉಪಾಧ್ಯಕ್ಷ ನಾಗರಾಜ ಗುತ್ತಿ, ಖಜಾಂಚಿ ವಿನಾಯಕ ಗಜಕೋಶ, ಮಲ್ಲೇಶ ಪರಾಪೂರ, ನಾಗರಾಜ ಸಂಗಾಪೂರ, ಜೀವನ ಪರಾಪೂರ, ಮಹಿಳಾ ಘಟಕದ ಅಧ್ಯಕ್ಷರಾದ ರೇಖಾ ಬಂಗಾರಶೆಟ್ಟರ, ಮೇಘನಾ ಕೊಟ್ಟೂರು ಉಪಸ್ಥಿತರಿದ್ದರು.